ಮಂಗಳೂರು: ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ವಿರುದ್ಧ ಸಚಿವ ರಮಾನಾಥ ರೈ ಅವರು ಅವಹೇಳನಕಾರಿಯಾಗಿ ಮಾತನಾಡಿಲ್ಲ ಎಂದಾದರೆ ವಾರದೊಳಗೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಹರಿಕೃಷ್ಣ ಬಂಟ್ವಾಳ ಸವಾಲು ಹಾಕಿದ್ದಾರೆ.ಅವರು ಮಂಗಳವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನಾನು ಮಾಡಿರುವ ಆರೋಪ ನಿರಾಧಾರ ಎಂದು ಸಚಿವ ರಮಾನಾಥ ರೈ ಹೇಳಿದ್ದಾರೆ. ನಾನು ಮಾಡಿರುವ ಆರೋಪಕ್ಕೆ ನನ್ನ ಬಳಿ ದಾಖಲೆ ಇದೆ. ಪೂಜಾರಿ ಅವರ ಬಗ್ಗೆ ಸಚಿವ ರೈ ಅವರು ಯಾರ ಬಳಿ ಅವಮಾನಕರವಾಗಿ ಮಾತನಾಡಿದ್ದಾರೆಯೋ ಅವರನ್ನೂ ಕರೆತರುತ್ತೇನೆ. ರೈ ಅವರಿಗೆ ನೈತಿಕತೆ, ಪ್ರಾಮಾಣಿಕತೆ ಮತ್ತು ಅವರೇ ಹೇಳಿದಂತೆ ಪೂಜಾರಿ ಅವರ ಮೇಲೆ ಗೌರವ ಇದ್ದಲ್ಲಿ ಧರ್ಮಸ್ಥಳಕ್ಕೆ ಬಂದು ಅಣ್ಣಪ್ಪ ಸ್ವಾಮಿ ಮತ್ತು ಮಂಜುನಾಥ ಸ್ವಾಮಿಯ ಎದುರು ಪ್ರಮಾಣ ಮಾಡಲಿ ಎಂದರು.