ಮಂಗಳೂರು; ಮಂಗಳೂರು ಹೊರವಲಯದ ತಲಪಾಡಿ ಸಮೀಪದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ ಶಾಖೆಗೆ ನುಗ್ಗಿ ದರೋಡೆಗೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಪಿಲಾರು,ದಾರಂದಬಾಗಿಲು ನಿವಾಸಿ ರಾಮಚಂದ್ರ ಯಾನೆ ಬೋಟ್ ರಾಮ(58) ಮತ್ತು ಪ್ರಕಾಶ್ ನಗರ ನಿವಾಸಿ ಮೋಹನ್ ಚಿಟ್ಟಿಯಾರ್(46) ಬಂಧಿತ ಆರೋಪಿಗಳು. ಕಳೆದ ಜೂನ್ 23 ಶುಕ್ರವಾರದಂದು ಮಧ್ಯಾಹ್ನ ಇಬ್ಬರೂ ಹೆಲ್ಮೆಟ್ ಧರಿಸಿ ಬ್ಯಾಂಕಿಗೆ ನುಗ್ಗಿ ಒಳಗಿದ್ದ ಮೂವರು ಸಿಬ್ಬಂದಿಯನ್ನು ಶೌಚಾಲಯದಲ್ಲಿ ಕೂಡಿ ಹಾಕಿದ್ದರು.
ಬಳಿಕ ಲಾಕರ್ ನಲ್ಲಿದ್ದ ಸುಮಾರು ಆರು ಕೋಟಿಗೂ ಅಧಿಕ ಬೆಳೆಬಾಳುವ 25 ಕೆ.ಜಿ ಚಿನ್ನವನ್ನು ಎಗರಿಸಿ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಸರಪ್ಪ ಎನ್ನುವರು ಕಲ್ಲಿನಿಂದ ಹೊಡೆದ ಪರಿಣಾಮ ಚಿನ್ನದ ಗೋಣಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು. ದರೋಡೆಯ ಯತ್ನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆಯು ಪ್ರಕರಣವನ್ನು ಸಿಸಿಬಿ ಪೊಲೀಸರಿಗೆ ಹಸ್ತಾಂತರಿಸಿತ್ತು. ಬ್ಯಾಂಕಿನ ಹತ್ತಿರದ ಶಾಪ್ ಗಳ ಸಿಸಿ ಕ್ಯಾಮರಾ ದೃಶ್ಯವಳಿಗಳನ್ನು ಪರಿಶೀಲನೆ ನಡೆಸಿದ ಸಿಸಿಬಿ ಪೊಲೀಸರಿಗೆ ಮಹತ್ತರ ಸುಳಿವು ಸಿಕ್ಕಿದೆ. ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳು ಸೇರಿರುವ ಬಗ್ಗೆ ಮಾಹಿತಿ ದೊರಕಿದ್ದು ಸಿಸಿಬಿ ಪೊಲೀಸರು ಬಂಧಿತ ಆರೋಪಿಗಳನ್ನು ಮಂಗಳವಾರ ಸಂಜೆ ಹೆಚ್ಚಿನ ವಿಚಾರಣೆಗಾಗಿ ಉಳ್ಳಾಲ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.