ಜಿನತತ್ವಗಳ ಅಭ್ಯಾಸಕ್ಕೆ ಯಕ್ಷಗಾನ ಪೂರಕ : ಮುನಿರಾಜ ಅಜಿಲ
ಮುಂಬಯಿ, ಜು.06: ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ ತನ್ನ ಪ್ರಾಯೋಜಕತ್ವದಲ್ಲಿ ಸಂಘದ ಸದಸ್ಯರಿಗಾಗಿ ಯಕ್ಷಗಾನ ತರಬೇತಿ ಶಿಬಿರ ಹಾಗೂ ಜಿನ ಪ್ರಸಂಗಗಳ ಪ್ರಸ್ತುತಿ ಸದುದ್ದೇಶದಿಂದ `ಶ್ರೀ ವೀರ ಯಕ್ಷ ಕಲಾ ಬಳಗ' ವನ್ನು ಕಳೆದ ಆದಿತ್ಯವಾರ ವಿಕ್ರೋಲಿಯ ವೀಕೇಸ್ ವಿದ್ಯಾಲಯದ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಬಿ.ಮುನಿರಾಜ ಅಜಿಲ ಅಧ್ಯಕ್ಷತೆಯಲ್ಲಿ ಶುಭಾರಂಭ ಗೊಳಿಸಿತು.
ಶುಭಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ನಗರದ ಪ್ರಸಿದ್ಧ ಕಲಾ ಸಂಘಟಕ, ಯಕ್ಷಗಾನಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದು ಶುಭಾರೈಸಿ ಯಕ್ಷಗಾನವು ಧಾರ್ಮಿಕ, ಸಾಮಾಜಿಕ ವಿಚಾರಗಳನ್ನು ಸಮಾಜಕ್ಕೆ ನೀಡುವುದರ ಮೂಲಕ ಒಂದು ಆರೋಗ್ಯ ಪೂರ್ಣ ಸಮಾಜ ನಿರ್ಮಾಣದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಯಕ್ಷಗಾನವನ್ನು ಕಲಿಯುವುದರಿಂದ, ಅದರಲ್ಲಿರುವ ಸಂಗತಿಗಳು ನಮ್ಮ ಉತ್ತಮ ಆರೋಗ್ಯಕ್ಕೂ ಜೊತೆಗೆ ಭಾಷಾಜ್ಞಾನ ಬೆಳೆಯಲು ಸಹಕಾರಿ ಆಗಿದೆ. ಯಕ್ಷಗಾನ ದ ಬೆಳವಣಿಗೆಯಲ್ಲಿ ಜೈನರ ಕೊಡುಗೆ ಅಪಾರ, ಈ ನಿಟ್ಟಿನಲ್ಲಿ ಧರ್ಮಸ್ಥಳ ಕ್ಷೇತ್ರದ ಕೊಡುಗೆ ನೆನಪಿಸಿದರು. ಮಕ್ಕಳು ಹೆಚ್ಚಿನ ಸಂಖ್ಯೆಯ ಲ್ಲಿ ಭಾಗವಹಿಸಿ, ಯಕ್ಷಗಾನ ಕಲಿಯುವಂತೆ ಮಾಡಿ ಈ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯದಲ್ಲಿ ತಂದೆತಾಯಿಯರ ಪಾತ್ರ ಮಹತ್ವದ್ದು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷ ಬಿ.ಮುನಿರಾಜ ಅಜಿಲ ಕಾರ್ಯಕ್ರಮಕ್ಕೆ ಚಾಲನೆಯನ್ನೀಡಿ ಮಾತನಾಡಿ ಯಾಂತ್ರೀಕೃತ ಜೀವನದ ಈ ಕಾಲದಲ್ಲಿಯೂ ತನ್ನ ಛಾಪನ್ನು ಎಲ್ಲಿಯೂ ಕುಂಠಿತಗೊಳಿಸದೆ ಬೆಳೆಯುತ್ತಿರುವ ಕಲೆ ಯಕ್ಷಗಾನ. ನಾವು ಜನ್ಮ ಭೂಮಿ ಬಿಟ್ಟು ಪರ ರಾಜ್ಯಕ್ಕೆ ಬಂದರೂ, ಇಲ್ಲಿಯೂ ನಾವು ಯಕ್ಷಗಾನದಂತಹ ಕಲೆಯನ್ನು ಆಸ್ವಾದಿಸಲು ಸಾಧ್ಯವಾಗಿದೆ. ಇದಕ್ಕೆ ಕಾರಣ ಇಲ್ಲಿರುವ ಕಲಾ ಪೆÇೀಷಕರು ಮತ್ತು ಆ ಕಲೆಗಾಗಿ ಹಗಲಿರುಳು ದುಡಿದ ಯಕ್ಷಗುರುಗಳು. ಈ ನಿಟ್ಟಿನಲ್ಲಿ ಯಕ್ಷಗಾನದ ಪೆÇೀಷಣೆಯಲ್ಲಿ ಅವಿರತವಾಗಿ ತನ್ನನ್ನು ತೊಡಗಿಸಿಕೊಂಡ ಬಾಲಕೃಷ್ಣ ಶೆಟ್ಟಿ ಅವರ ಕಾರ್ಯವು ಅವಿಸ್ಮರಣೀಯ ಮತ್ತು ಅನುಪಮವಾಗಿದೆ. ನಮ್ಮ ಸಂಘವು 20 ವರ್ಷಗಳನ್ನು ಪೂರೈಸುತ್ತಿರುವ ಈ ಸುಸಂಧರ್ಭದಲ್ಲಿ ಜಿನತತ್ವಗಳು ಸಮಾಜಕ್ಕೆ ದೊರಕಲೆಂಬ ಆಶಯ ಮತ್ತು ಸದುದ್ದೇಶದೊಂದಿಗೆ, ಜೈನಕಾಶಿ ಮೂಡುಬಿದ್ರೆ ಗುರುಪೀಠದ ಶುಭಾಶೀರ್ವಾದ ಹಾಗೂ ಬಾಲಕೃಷ್ಣ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಯಕ್ಷಗಾನ ತರಬೇತಿ ಶಿಬಿರ ಕೈಗೊಂಡಿದ್ದು, ಸಂಘದ ಸದಸ್ಯರು ಈ ಸಮಾಜಮುಖಿ ಕಾರ್ಯದಲ್ಲಿ ಸಕ್ರೀಯರಾಗಬೇಕು ಎಂದು ಮನವಿ ಮಾಡಿದರು.
ಸಂಘದ ಹಿರಿಯ ಸದಸ್ಯರಾದ ನಿವೃತ್ತ ಶಿಕ್ಷಕ ಸನತ್ಕುಮಾರ್ ಜೈನ್ ಕಲಾ ಬಳಗಕ್ಕೆ ತಮ್ಮ ಶುಭಾಶಯ ಕೋರುತ್ತಾ, ಕಲಿಯುವವನಲ್ಲಿ ಆಸಕ್ತಿ, ಸಮಯಪ್ರಜ್ಞೆ, ಸಾಧಿಸಬೇಕೆಂಬ ಛಲ ಇದ್ದಾಗ, ಎಂತಹ ಕಲೆಯನ್ನೂ ಕೂಡ ಕರಗತ ಮಾಡಿಕೊಳ್ಳಲು ಸಾಧ್ಯವಿದೆ. ಅಂತೆಯೇ ಮಕ್ಕಳು ಈ ಅವಕಾಶದ ಲಾಭ ಪಡೆಯಬೇಕು ಎಂದರು.
ಜತೆ ಕಾರ್ಯದರ್ಶಿಗಳಾದ ರಘುವೀರ್ ಹೆಗ್ಡೆ, ಮನೀಶ್ ಹೆಗ್ಡೆ, ಜೊತೆ ಕೋಶಾಧಿಕಾರಿ ಸಂಪತ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮದ ಸಂಪೂರ್ಣ ವೆಚ್ಚ ಭರಿಸಿದ ರಘುವೀರ್ ಹೆಗ್ಡೆ ಮತ್ತು ಪರಿವಾರವನ್ನು ಅಧ್ಯಕ್ಷರು ಗೌರವಿಸಿದರು. ಎನ್.ರಾಜವರ್ಮ ಜೈನ್, ಶಿಶುಪಾಲ ಜೈನ್, ಮಹಿಳಾ ವಿಭಾಗದ ಜ್ಯೋತಿ ಜೆ.ಜೈನ್, ಯುವವಿಭಾಗದ ವಿಕಾಸ್ ಜೈನ್, ವಿಕ್ರಾಂತ್ ಅತಿಕಾರಿ, ಅಭಿನಂದನ್ ಜೈನ್, ಸಂಪತ್ ಕುಮಾರ್ ಕಾರ್ಯಕ್ರಮಕ್ಕೆ ಸಹಕರಿಸಿದ್ದರು.
ಸಂಘದ ಮಹಿಳಾ ವಿಭಾಗದ ಸುಜಯ ಎಲ್.ಜೈನ, ಸುಪ್ರಿಯಾ ಆರ್.ಹೆಗ್ಡೆ, ಪದ್ಮಪ್ರಿಯ ಪಿ.ಬಲ್ಲಾಳ್ ಬಳಗದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ಸಂಘದ ಗೌರವ ಕಾರ್ಯದರ್ಶಿ ಪವನಂಜಯ ಬಲ್ಲಾಳ್ ಸ್ವಾಗತಿಸಿದರು. ಯುವ ವಿಭಾಗಧ್ಯಕ್ಷ ಭರತ್ ರಾಜ ಜೈನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಭಾಗದ ಅವಕಾಶ್ ಜೈನ್ ಕಾರ್ಯಕ್ರಮ ನಿರೂಪಿಸಿ ನಿವೃತ್ತ ಶಿಕ್ಷಕ ಲೋಕನಾಥ್ ಜೈನ್ ಥಾಣೆ ವಂದನಾರ್ಪಣೆಗೈದರು.