ಮಂಗಳೂರು: ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಆರ್ಎಸ್ಎಸ್ ಕಾರ್ಯಕರ್ತ ಸಜಿಪಮುನ್ನೂರು ಕಂದೂರಿನ ಶರತ್ ಪಾರ್ಥಿವ ಶರೀರವನ್ನು ಶನಿವಾರ ಭಾರೀ ಜನಸ್ತೋಮದೊಂದಿಗೆ ಅವರ ಹುಟ್ಟೂರಿಗೆ ಕೊಂಡೊಯ್ಯಲಾಯಿತು.
ಈ ಸಂದರ್ಭ ಬಿ.ಸಿ. ರೋಡ್ ಪರಿಸರದಲ್ಲಿ ಶವಯಾತ್ರೆಯ ಮೇಲೆ ಕಲ್ಲುತೂರಾಟ, ವಾಹನಗಳಿಗೆ ಹಾನಿ, ಲಾಠೀ ಚಾರ್ಜ್ ಮೊದಲಾದ ಘಟನೆಗಳು ಸಂಭವಿಸಿ ಪರಿಸ್ಥಿತಿ ಉದ್ವಿಗ್ನಗೊಂಡಿತು. ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರೂ ಶವಯಾತ್ರೆಯು ಕೈಕಂಬ ತಲುಪುತ್ತಿದ್ದಂತೆ ದುಷ್ಕರ್ಮಿಗಳು ಕಲ್ಲೆಸೆದುದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಕಲ್ಲೆಸೆತ ಪ್ರಶ್ನಿಸಿ ಕೆಲವರು ಅಲ್ಲಿಯೇ ನಿಂತಾಗ ಪೊಲೀಸರು ಲಾಠೀಚಾರ್ಜ್ ನಡೆಸಿದರು. ಅನಂತರ ಜನ ಸೇರಿದಲ್ಲೆಲ್ಲ ಲಾಠಿ ಬೀಸಿ ಜನರನ್ನು ಚದುರಿಸಲಾಯಿತು.
ಕೈಕಂಬ, ಬಿ.ಸಿ.ರೋಡ್, ಬಿ.ಸಿ. ರೋಡ್ ಜಂಕ್ಷನ್, ಬಿ.ಸಿ. ರೋಡ್ ಸರ್ಕಲ್ ಪರಿಸರದಲ್ಲಿ ಆಗಾಗ ಲಾಠೀಚಾರ್ಜ್ ನಡೆದು ಸಂಜೆತನಕವೂ ಜನ ಸೇರದಂತೆ ಪೊಲೀಸರು ನೋಡಿಕೊಂಡರು.ಪ್ರಸ್ತುತ ಬಿ.ಸಿ. ರೋಡ್ನಲ್ಲಿ ಪರಿಸ್ಥಿತಿ ಶಾಂತ ವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಾವಿರಕ್ಕೂ ಹೆಚ್ಚು ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಐಜಿಪಿ ಸಹಿತ ಉನ್ನತ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಒಟ್ಟಾರೆ ಬಂತ್ವಾಳ ಬೂದಿ ಮುಚ್ಚಿದ ಕೆಂಡದಂತಿದೆ.