ಮಂಗಳೂರು: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯಾರ್ಪದವಿನಲ್ಲಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ಒದಗಿಸಿದ್ದ ಭಿಗಿ ಭದ್ರತೆಯ ನಡುವೆಯೂ ಚೂರಿ ಇರಿದಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ದ್ವಿಚಕ್ರ ವಾಹನದಲ್ಲಿ ಆಗಮಿಸಿದ್ದ ಮೂವರು ದುಷ್ಕರ್ಮಿಗಳ ತಂಡ "ವಾಹನದ ಪೆಟ್ರೋಲ್ ಖಾಲಿಯಾಗಿದೆ" ಎಂಬ ನೆಪದಲ್ಲಿ ಅನ್ಯಕೋಮಿನ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಗುರಿಯಾಗಿಸಿ ಚೂರಿ ಇರಿದಿತ್ತು.
ಇದರಲ್ಲಿ ಇಬ್ಬರಿಗೆ ಗಾಯಗಳಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರುದ್ಧ ಕೋಮಿನ ಮೂವರನ್ನು ಬಂಧಿಸಲಾಗಿದೆ.ಬಂಧಿತರು ಫರಂಗಿಪೇಟೆಯ ನಿವಾಸಿಗಳಾಗಿದ್ದಾರೆ. ಜು.7ರಂದು ಅಡ್ಯಾರ್ ನಲ್ಲಿ ಕಾಂಗ್ರೆಸ್ ಸಮಾವೇಶ ನಡೆಯುತ್ತಿದ್ದ ವೇಳೆ ಮಾರಕಾಸ್ತ್ರಗಳಿಂದ ಯುವಕರಿಬ್ಬರ ಮೇಲೆ ದಾಳಿ ನಡೆಸಿದ್ದರು. ಘಟನೆಯಿಂದ ಓರ್ವ ಯುವಕನ ಕೈ ಹಾಗೂ ಹೊಟ್ಟೆಯ ಬಲಭಾಗಕ್ಕೆ ತೀವ್ರ ಗಾಯವಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇನ್ನೋರ್ವನಿಗೆ ಸಣ್ಣಪುಟ್ಟ ಗಾಯವಾಗಿತ್ತು.