ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಅಶಾಂತಿಯಿಂದ ದೇಶಕ್ಕೆ ತಪ್ಪು ಸಂದೇಶ ಹೋಗುತ್ತಿದೆ, ಆಡಳಿತದ ದುರಹಂಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಬಲಿಯಾಗುತ್ತಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಆರೋಪಿಸಿದರು. ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ದಕ್ಷಿಣ ಕನ್ನಡ ಜಿಲ್ಲೆಯ ಸಂಘರ್ಷದ ಬಗ್ಗೆ ಕೇಂದ್ರ ಕ್ಯಾಬಿನೆಟ್ ಮುಂದೆ ಇಡುತ್ತೇನೆ.
ಇವತ್ತು ಜಿಲ್ಲಾಧಿಕಾರಿಗಳೊಡನೆ ಸಭೆ ಮಾಡಿದ್ದು, ಸಭೆಯ ವರದಿಯನ್ನು ಕೇಂದ್ರ ಗೃಹಸಚಿವಾಲಯದ ಗಮನಕ್ಕೆ ತರುತ್ತೇನೆ" ಎಂದರು.ಬಂಟ್ವಾಳ, ಉಳ್ಳಾಲ ಎರಡು ಪ್ರದೇಶ ಬಿಟ್ಟರೆ ಬೇರೆ ಎಲ್ಲೂ ಅಹಿತಕರ ಘಟನೆ ನಡೆದಿಲ್ಲ. ಆದ್ರೆ ಇಡೀ ಜಿಲ್ಲೆಗೆ ಇದನ್ನು ವ್ಯಾಪಿಸುವ ಹುನ್ನಾರ ನಡೆಯುತ್ತಿದೆ. ಒಂದೂವರೆ ತಿಂಗಳಿನಿಂದ ಜಿಲ್ಲೆಯಲ್ಲಿ ನಿಷೇಧಾಜ್ಞೆ ಇದೆ. ರಮಾನಾಥ ರೈ, ಯುಟಿ ಖಾದರ್ ರಿಂದ ಜಿಲ್ಲೆಗೆ ಅಪಮಾನ ಎಂದು ವಾಗ್ದಾಳಿ ನಡೆಸಿದರು. ಜಿಲ್ಲೆಯಲ್ಲಾಗುತ್ತಿರುವ ಘಟನೆಗಳಿಗೆ ರಮಾನಾಥ ರೈ, ಯುಟಿ ಖಾದರ್ ನೇರ ಹೊಣೆ ಎಂದು ಆರೋಪಿಸಿದರು.