ಜು.14: ಗೋರೆಗಾಂನ ಲಲಿತ್ ಕ್ರಿಸ್ಟಲ್ ಸಭಾಗೃಹದಲ್ಲಿ ವಿಶೇಷ ಸಭೆ
ಮುಂಬಯಿ, ಜು.12: ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ನಿಯೋಗವು ಕಳೆದ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಪುತ್ತೂರು ಪಡುಮಲೆ ಅಲ್ಲಿನ ಬಡಗನ್ನೂರು ಗ್ರಾಮದ ದೇಯಿ ಬೈದ್ಯೆತಿ, ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ಲ್'ನಲ್ಲಿ ನಿರ್ಮಾಣ ಗೊಳ್ಳುತ್ತಿರುವ ವಿವಿಧ ಶ್ರದ್ಧಾ ಕೇಂದ್ರಗಳ ಪುನರುತ್ಥಾನ ಯೋಜನೆಗಳ ಬಗ್ಗೆ ಮಾಹಿತಿ ನೀಡಿತು.
ಕೋಟಿ ಚೆನ್ನಯ ಮೂಲಸ್ಥಾನ ಗರೋಡಿ, ದೇಯಿ ಬೈದ್ಯೆತಿ, ಗುರು ಪಟ್ಟದ ಸಾಯನ ಬೈದ್ಯರ ಧರ್ಮ ಚಾವಡಿ, ಆದಿದೈವ ಧೂಮಾವತಿ ದೈವಸ್ಥಾನ, ಕುಪ್ಪೆ ಪಂಜುರ್ಲಿ, ಕೊರತಿ ದೈವಗಳ ಸಾನಿಧ್ಯ, ಸರೋಳಿ ಸೈಮಂಜ ಕಟ್ಟೆ, ದೇಯಿ ಬೈದ್ಯೆತಿ ಮಹಾ ಸಮಾಧಿ, ಬೆರ್ಮೆರೆ ಗುಂಡ ಇವೇ ಮುಂತಾದ ಶ್ರದ್ದಾ ಬಿಂದುಗಳ ಪುನರುತ್ಥಾನ ಯೋಜನೆಯ ಕೆಲಸ ಕಾಮಗಾರಿಗಳು ಕ್ಷೇತ್ರದಲ್ಲಿ ಭರದಿಂದ ಸಾಗುತ್ತಿರುವ ವಿಚಾರ ತಿಳಿದು ಡಾ| ಹೆಗ್ಗಡೆ ಹರ್ಷ ವ್ಯಕ್ತ ಪಡಿಸಿದರು.
ಈ ಬಗ್ಗೆ ಇದ್ದ ನನ್ನ ಕನಸು ಸಾಕಾರಗೊಳ್ಳುತ್ತಿದ್ದು ತನಗೆ ಸಂತಸ ತಂದಿದೆ. ಈ ಕಾರ್ಯವು ಬೇಗನೆ ಸಾಕಾರಗೊಳ್ಳಲಿ ಎಂದು ಆಶಯ ವ್ಯಕ್ತಪಡಿಸುತ್ತಾ ಮೂಲಸ್ಥಾನದ ಗೆಜ್ಜೆಗಿರಿ ಕ್ಷೇತ್ರ ಪುನರುತ್ಥಾನ ಯೋಜನೆಯ ನೀಳ ನಕ್ಷೆಯನ್ನು ಪರಿಶೀಲಿಸಿ ಗೆಜ್ಜೆಗಿರಿಯಲ್ಲಿ ಥಿüೀೀಮ್ ಪಾರ್ಕ್ ರೀತಿಯಲ್ಲಿ ಅಭಿವೃದ್ಧಿ ಪಡಿಸಿ ಬರುವ ಭಕ್ತಾಭಿಮಾನಿಗಳಿಗೆ ಮೂಲ ಸೌಕರ್ಯ ಒದಗಿಸುವ ವ್ಯವಸ್ಥೆ ಕೂಡ ಮಾಡುವಂತೆ ಸಲಹೆ ನೀಡಿದರು.
ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಚಿತ್ತರಂಜನ್ ಕಂಕನಾಡಿ, ಕಾರ್ಯಧ್ಯಕ್ಷರುಗಳಾದ ಪೀತಾಂಬರ ಹೇರಾಜೆ, ಜಯಂತ ನಡುಬೈಲ್, ಉಪಾಧ್ಯಕ್ಷರು ಡಾ| ರಾಜಶೇಖರ ಆರ್.ಕೋಟ್ಯಾನ್ ಮುಂಬಯಿ ಅವರು ಡಾ| ಹೆಗ್ಗಡೆ ಅವರಿಗೆ ಗೌರವಾರ್ಪಣೆ ಸಲ್ಲಿಸಿದರು. ಬಳಿಕ ಕ್ಷೇತ್ರದ ತಾಂತ್ರಿಕ ಸಲಹೆಗಾರ ವಾಸ್ತುಶಿಲ್ಪಿ ಸಂತೋಷ್ ಕುಮಾರ್ ಯೋಜನೆಯ ಸಮಗ್ರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಶ್ರೀಧರ ಪೂಜಾರಿ, ತಂತ್ರಿಗಳಾದ ಲೋಕೇಶ್ ಶಾಂತಿ, ಸಂತೋಷ್ ಕೋಟ್ಯಾನ್ ಉಗ್ಗೆಲ್ ಬೆಟ್ಟು, ರವಿ ಪೂಜಾರಿ ಚಿಲಿಂಬಿ, ಚಂದ್ರಶೇಖರ ಉಚ್ಚಿಲ್, ಸೋಮನಾಥ ಬಂಗೇರ, ಸಧಾನಂದ್ ಉಂಗಿಲಬೈಲು ಹಾಗು ಇನ್ನಿತರರು ಉಪಸ್ಥಿತರಿದ್ದರು.
ಜು.14: ಮುಂಬಯಿನಲ್ಲಿ ವಿಶೇಷ ಸಭೆ:
ದೇಯಿ ಬೈದ್ಯೆತಿ, ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ಲ್'ನ ಯೋಜನಾ ಚರ್ಚೆ ಕುರಿತು ಇದೇ ಜುಲಾಯಿ 14ನೇ ಶುಕ್ರವಾರ ರಾತ್ರಿ 7.00 ಗಂಟೆಗೆ ಮುಂಬಯಿ ಗೋರೆಗಾಂ ಪೂರ್ವದ ರೈಲ್ವೇ ಠಾಣೆಯ ಮುಂಭಾಗದ ಹೊಟೇಲ್ ಜಯಲೀಲಾ ಬಾಂಕ್ವೇಟ್ ಸಭಾಗೃಹದಲ್ಲಿ ವಿಶೇಷ ಸಭೆ ಆಯೋಜಿಸಲಾಗಿ ದೆ ಎಂದು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ, ಗೆಜ್ಜೆಗಿರಿ ಸ್ಥಾಪಕ ಪ್ರವರ್ತಕ ಮಂಡಳಿಯ ನಿತ್ಯಾನಂದ ಡಿ.ಕೋಟ್ಯಾನ್ ತಿಳಿಸಿದ್ದಾರೆ. ಸಭೆಯಲ್ಲಿ ಗೆಜ್ಜೆಗಿರಿ ಕ್ಷೇತ್ರದ ಸರ್ವ ಹಿತೈಷಿಗಳು, ಬಿಲ್ಲವ ಧುರೀಣರು ಪಾಲ್ಗೊಂಡು ಸಭೆಯ ಯಶಸ್ಸಿಗೆ ಸಹಕರಿಸುವಂತೆ ನಿತ್ಯಾನಂದ್ ಡಿ.ಕೋಟ್ಯಾನ್ ಹಾಗೂ ತೋನ್ಸೆ ಸಂಜೀವ ಪೂಜಾರಿ ಈ ಮೂಲಕ ವಿನಂತಿಸಿದ್ದಾರೆ.