(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಜು.17: ಪಾಲಿಗೆ ಬಂದ ಯೋಗ ನಮ್ಮ ಪಾಲಿಗೆ ಒದಗಿದೆ. ಕಾರಣಿಕ ಶಕ್ತಿ ಕೇಂದ್ರವಾಗಿ ಧೈರ್ಯ ನೀಡಿದ ನಮ್ಮನ್ನು ಪ್ರೇರೆಪಿಸಿದೆ. ಕ್ಷೇತ್ರದ ಶೀಘ್ರಗತಿ ಅಭಿವೃದ್ಧಿಗೆ ಮುಂಬಯಿಗರ ಸಹಕಾರ ಅನುಪಮವಾಗಿದೆ. ಮನುಕುಲವು ಸೇವಾಧರ್ಮ ಹುಟ್ಟುವಾಗ ಪಡೆದು ಬಂದ ಯೋಗವಾಗಿದ್ದು, ಅದನ್ನು ಸಮಯೋಚಿತವಾಗಿ ನಿಸ್ವಾರ್ಥವಾಗಿ ಬಳಸಿದಾಗ ಯೋಜನೆಗಳು ಫಲಪ್ರದ ಗೊಳ್ಳುವುದು. ಆದುದರಿಂದ ನಿಮ್ಮ ಮಟ್ಟಿನ ಒಂದು ಇಟ್ಟಿಗೆಯನ್ನಾದರು ನೀಡಿ ಯೋಜನೆಗೆ ಸ್ಪಂದಿಸಿ. ಅಂತೆಯೇ ಸರ್ವರ ಸಹಯೋಗದಿಂದ ಗೆಜ್ಜೆಗಿರಿ ಯೋಜನೆ ಸಕಾರಗೊಳಿಸೋಣ. ಆ ಮೂಲಕ ನಂದನ ಬಿತ್ತ್ಲ್ ಬಿಲ್ಲವರ ಜೀವನಾಡಿಯಾಗಿ ಒಂದು ಕಾರಣಿಕ ಕ್ಷೇತ್ರವಾಗಿಸೋಣ ಎಂದು ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ಲ್ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಚಿತ್ತರಂಜನ್ ಕಂಕನಾಡಿ ತಿಳಿಸಿದರು.
ಪುತ್ತೂರು ಪಡುಮಲೆ ಅಲ್ಲಿನ ಬಡಗನ್ನೂರು ಗ್ರಾಮದಲ್ಲಿ ನಿರ್ಮಾಣ ಗೊಳ್ಳುತ್ತಿರುವ `ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ಲ್' ಯೋಜನಾ ಸಭೆಯನ್ನುದ್ದೇಶಿಸಿ ಚಿತ್ತರಂಜನ್ ಮಾತನಾಡಿದರು.
ಇಂದಿಲ್ಲಿ ಶುಕ್ರವಾರ ರಾತ್ರಿ ಮುಂಬಯಿ ಗೋರೆಗಾಂ ಪೂರ್ವದ ಜಯಲೀಲಾ ಬಾಂಕ್ವೇಟ್ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಭೆಗೆ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ ಅವರು ದೀಪ ಪ್ರಜ್ವಲಿಸಿ ಸಭೆಗೆ ಚಾಲನೆಯನ್ನೀಡಿ ಶುಭಶಂಸನೆಗೈದರು.
ಶ್ರೀ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಕಾರ್ಯಾಧ್ಯಕ್ಷ ಪೀತಾಂಬರ ಹೇರಾಜೆ, ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಗುರುಪುರ, ಗೆಜ್ಜೆಗಿರಿ ಸ್ಥಾಪಕ ಪ್ರವರ್ತಕ ಮಂಡಳಿ ಸದಸ್ಯ ಹರೀಶ್ ಜಿ.ಅವಿೂನ್, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಮಾಜಿ ಅಧ್ಯಕ್ಷ ಎಲ್.ವಿ ಅವಿೂನ್, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಅಧ್ಯಕ್ಷ ಎನ್.ಟಿ ಪೂಜಾರಿ ವೇದಿಕೆಯಲ್ಲಿ ಆಸೀನರಾಗಿದ್ದರು. ಕ್ಷೇತ್ರದ ತಾಂತ್ರಿಕ ಸಲಹೆಗಾರ, ವಾಸ್ತುಶಿಲ್ಪಿ ಸಂತೋಷ್ ಕುಮಾರ್ ಪೂಜಾರಿ ಕ್ಷೇತ್ರದ ವಿವಿಧ ಶ್ರದ್ಧಾ ಕೇಂದ್ರಗಳ ಪುನರುತ್ಥಾನ, ಕಟ್ಟಡ ಯೋಜನೆ, ಕಾಮಗಾರಿಗಳ ಬಗ್ಗೆ ಸ್ಥೂಲವಾದ ಮಾಹಿತಿ ನೀಡಿದರು.
ದೇಯಿ ಬೈದ್ಯೆತಿಗೆ ಆರಾಧನೆ ನಡೆಯದ ಕೊರುಗು ಬಿಲ್ಲವರಿಗಿದ್ದು ಆ ಮೂಲಕ ಬಿಲ್ಲವರಾದ ನಾವು ಇಂದು ತಾಯಿಯ ಋಣದಲ್ಲಿದ್ದೇವೆ. ತುಳುನಾಡಿನಾದ್ಯಂತ ಸುಮಾರು 250 ಗರಡಿಗಳಿದ್ದು ಗರಡಿ ಪ್ರಧಾನ ಬಿಲ್ಲವರಲ್ಲಿ ಸದ್ಯ 20% ಗರೋಡಿಗಳು ಮಾತ್ರ ಬಿಲ್ಲವರ ಆಡಳಿತ್ವದಲ್ಲಿವೆ. ಆದರೆ ಇಂದಿಗೂ ಬಿಲ್ಲವರೇ ಗರಡಿಗಳಿಗೆ ಬಹು ಸಂಖ್ಯೆಯ ಭಕ್ತರು. ಗೆಜ್ಜೆಗಿರಿ ವಿಶ್ವದ ಬಿಲ್ಲವರ ಆಸ್ತಿ ಆಗಿದ್ದು ಸರ್ವರ ಶಕ್ತಿ ಮತ್ತು ಭಕ್ತಿ ಕೇಂದ್ರವಾಗಲಿದೆ. ಲೋಕಾಭಿಮಾನಿಗಳ ಸೇವೆಯಿಂದ ಈ ಕ್ಷೇತ್ರ ಬೆಳಗಬೇಕಾಗಿದ್ದು ಸರ್ವರ ಸಹಯೋಗ ಅವಶ್ಯವಾಗಿದೆ. ಇದಕ್ಕಾಗಿ ತಮ್ಮೆಲ್ಲರಿಗೂ ಸಮಾಜ ಸೇವೆ ಮಾಡುವ ಅವಕಾಶ ಗೆಜ್ಜೆಗಿರಿ ಕ್ಷೇತ್ರ ಒದಗಿಸಿದೆ. ಶ್ರದ್ಧಾಳು ಸೇವಕರಿಗೆ ಪುಣ್ಯ ಕಟ್ಟಿಟ್ಟ ಬುತ್ತಿ ಆಗಲಿದೆ. ಸರ್ವರೂ ಏಕಾಗೃತರಾಗಿ ಶ್ರಮಿಸಿ ಗೆಜ್ಜೆಗಿರಿಯನ್ನು ಜಾಗತಿಕ ಶಕ್ತಿ ಕೇಂದ್ರವಾಗಿಸೋಣ. ಬಿಲ್ಲವರಿಗೂ ಭವಿಷ್ಯ ರೂಪಿಸುವ ಯುವ ಧುರೀಣರ ದಂಡು ಸಜ್ಜಾಗುತ್ತಿದ್ದು ರಾಜಶೇಖರ್ ಕೋಟ್ಯಾನ್, ನಿತ್ಯಾನಂದ ಕೋಟ್ಯಾನ್, ಎನ್.ಟಿ ಪೂಜಾರಿ ಅಂತಹ ಉತ್ಸಾಹಿ ಮುಂದಾಳುಗಳಿಗೆ ನಾಯಕತ್ವ ಕೊಡುವ ಕಾಲ ಸನ್ನಿಹಿತವಾಗಿದೆ ಎಂದು ಪೀತಾಂಬರ ಹೇರಾಜೆ ಅಭಿಪ್ರಾಯ ಪಟ್ಟರು.
ಎನ್.ಟಿ ಪೂಜಾರಿ ಮಾತನಾಡಿ ಎಲ್ಲರೂ ಏಕತರಾದರೆ ಸಮಾಜೋಭಿವೃದ್ಧಿಯ ಕೆಲಸ ಸಾಗಲು ಏನೂ ಕಷ್ಟವಾಗದು. ಅಂತೆಯೇ ಗೆಜ್ಜೆಗಿರಿ ಕ್ಷೇತ್ರೋದ್ಧಾರಕ್ಕೆ ತಾಪತ್ರ್ಯ ಆಗದು. ನಿಷ್ಠರಾಗಿ ಸಮಾಜಕ್ಕೆ ಸೇವೆ ವಿನಿಯೋಗಿಸುವುದು ಪುಣ್ಯದ ಕೆಲಸವಾಗುವುದು ಎಂದರು.
ಬಿಲ್ಲವರು ಸ್ವಸಮುದಾಯದ ಇತಿಹಾಸ ಮರೆತಿರುವುದು ಕಾಣುತ್ತಿದೆ. ಆದರೂ ಕಾಲ ಕಳೆದಿಲ್ಲ. ಪ್ರಸಕ್ತ ಬಿಲ್ಲವರಿಗೆ ಜೀವನದಲ್ಲಿನ ಗೆಜ್ಜೆಗಿರಿ ಸೇವೆ ಮಾಡಲು ಕಾಲ ಒದಗಿದೆ. ಇಂತಹ ಒಂದೇ ಐತಿಹಾಸಿಕ, ಮಹತ್ವದ ಅವಕಾಶವನ್ನು ನಿಷ್ಠೆಯೊಂದಿಗೆ ಸದ್ಭಳಕೆ ಮಾಡಬೇಕಾಗಿದೆ. ಮಾತೆ ದೇಯಿ ಬೈದ್ಯೆತಿ ಮಕ್ಕಳು ಒಂದಾಗಿ ಸೇವಾ ನಿರತರಾಗಿ ಭವ್ಯ ಯೋಜನೆಯನ್ನು ರೂಪುಗೊಳಿಸೋಣ ಎಂದು ಎಲ್.ವಿ.ಅವಿೂನ್ ಕರೆಯಿತ್ತರು.
ಕ್ಷೇತ್ರಾಡಳಿತ ಸಲಹಾಗಾರ ಜಯಾನಂದ ಮುಗ್ಗಗುತ್ತು ಪ್ರಸ್ತಾವಿಕ ನುಡಿಗಳನ್ನಾಡಿ ಮಾತೆ ದೇಯಿ ಬೈದ್ಯೆತಿ ಮಹಾ ಸಮಾಧಿ, ಕೋಟಿ ಚೆನ್ನಯ ಮೂಲಸ್ಥಾನ, ಆದಿ ದೈವ ಧೂಮಾವತಿ ಕ್ಷೇತ್ರ, ಗುರು ಸಾಯನ ಬೈದ್ಯರ ಶಕ್ತಿ ಪೀಠ, ಬೆರ್ಮೆರ್ ಗುಂಡ, ಕುಪ್ಪೆ ಪಂಜುರ್ಲಿ ದೈವಸ್ಥಾನ, ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆ ಇತ್ಯಾದಿ ವೈಶಿಷ್ಟ ್ಯತೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಇದು ಭಾರತ ದೇಶದ ಏಕೈಕ ಇತಿಹಾಸವುಳ್ಳ ಕ್ಷೇತ್ರವಾಗಿ ಬಿಲ್ಲವರ ಸ್ವಾಭಿಮಾನದ ಕ್ಷೇತ್ರವಾಗಲಿದೆ.
ಕುದ್ರೋಳಿಯ ಶ್ರೀ ಕ್ಷೇತ್ರ ಗೋಕರ್ಣಥೇಶ್ವರ ದೇವಸ್ಥಾನ ರಚನೆಯ ವೇಳೆಗೂ ಇದೇ ಸಭಾಗೃಹದಲ್ಲಿ ಸುಮಾರು 17 ಸಭೆಗಳು ನಡೆಸಲ್ಪಟ್ಟು ಬಹುಪಾಲು ಮೊತ್ತವನ್ನು ಮುಂಬಯಿ ಬಿಲ್ಲವರೂ, ಭಕ್ತರೂ ಒದಗಿಸಿ ಪುಣ್ಯಕಟ್ಟಿ ಕೊಂಡಿದ್ದಾರೆ. ಬಹುಶಃ ತುಳುನಾಡಿನ ಪ್ರತೀಯೊಂದು ದೈವಸ್ಥಾನ, ದೇವಸ್ಥಾನ, ಮಂದಿರ ಮಠಗಳಿಗೆ ಮುಂಬಯಿ ಭಕ್ತರದ್ದೇ ಬಹುಪಾಲು ಕೊಡುಗೆ ಇದ್ದೇಇದೆ. ಅಂತೆಯೇ ಗೆಜ್ಜೆಗಿರಿ ಬೃಹತ್ ಯೋಜ£ಗೂ ಮುಂಬಯಿ ಜನತೆಯೇ ಶ್ರಮಿಸುವ ಭರವಸೆ ನನಗಿದೆ. ಬುದ್ಧಿಜೀವಿಗಳಾದ ಮಾನವನು ಬದುಕಿನಲ್ಲಿ ಏನಾದರೂ ಒಳ್ಳೆಯ ಕೆಲಸ ಸಾಧನೆ ಮಾಡಿ ಇಂತಹ ಸಮಾಜಪರ, ಜನಹಿತ ಸೇವೆಗಳಲ್ಲಿ ತೊಡಗಿಸಿ ಕೊಳ್ಳಬೇಕು. ಆವಾಗಲೇ ಜನ್ಮ ಸಾರ್ಥಕವಾಗುವುದು ಎಂದು ಜಯ ಸುವರ್ಣ ತಿಳಿಸಿದರು.
ನಿತ್ಯಾನಂದ ಕೋಟ್ಯಾನ್ ಮಾತನಾಡಿ ಜಯ ಸುವರ್ಣರಂತಹ ಮಹಾನುಭವಿ ಮುತ್ಸದ್ಧಿಗಳ ಮುಂದಾಳುತ್ವದಲ್ಲಿ ಗೆಜ್ಜೆಗಿರಿ ಭವ್ಯ ಯೋಜನೆ ಸುಲಭವಾಗಿ ರೂಪುಗೊಳ್ಳುವ ಆಶಯ ನಮ್ಮದಾಗಿದೆ. ವಿಶ್ವದಾದ್ಯಂತ ನೆಲೆಯಾದ ಪ್ರತೀಯೋರ್ವ ಬಿಲ್ಲವರು ಸೇವೆಗೈದು ತಮ್ಮ ಮೂಲಸ್ಥಾನದ ಏಳಿಗೆಗಾಗಿ ಒಮ್ಮತದಿಂದ ಶ್ರಮಿಸುವ ಅಗತವಿದೆ ಎಂದರು.
ಶ್ರೀ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಉಪಾಧ್ಯಕ್ಷ ರಾಜಶೇಖರ್ ಆರ್.ಕೋಟ್ಯಾನ್ ಸ್ವಾಗತಿಸಿ ಗೆಜ್ಜೆಗಿರಿ ಬಗ್ಗೆ ಮುಂಬಯಿ ಜನತೆಗೆ ಸ್ವಷ್ಟ ತಿಳುವಳಿಕೆ ನೀಡಲು ಈ ಸಭೆ ಕರೆಯಲಾಗಿದೆ. ಇದು ಹಣ ಒಗ್ಗೂಡಿಸುವ ಸಭೆಯಲ್ಲ ಬಿಲ್ಲವ ಸಮುದಾಯವನ್ನು ಒಗ್ಗೂಡಿಸುವ ವಿಶ್ವ ಬಿಲ್ಲವರ ವೇದಿಕೆ ಆಗಿದೆ ಎಂದರು.
ಶ್ರೀ ಗೆಜ್ಜೆಗಿರಿ ಪ್ರವರ್ತಕ ಮಂಡಳಿ ಸದಸ್ಯರುಗಳಾದ ಸುರೇಂದ್ರ ಎ.ಪೂಜಾರಿ ಸಭಿಕರ ಪರವಾಗಿ ಮಾತನಾಡಿದರು. ಈ ಸಂದಭದಲ್ಲಿ ಪ್ರವರ್ತಕ ಸದಸ್ಯರುಗಳಾದ ಭಾಸ್ಕರ್ ಎಂ.ಸಾಲ್ಯಾನ್, ದಯಾನಂದ ಆರ್.ಪೂಜಾರಿ ಥಾಣೆ, ಸುರೇಶ್ ಪೂಜಾರಿ ವಾಶಿ, ನಿಲೇಶ್ ಪೂಜಾರಿ ಪಲಿಮಾರ್ ಮತ್ತಿತರರು ಉಪಸ್ಥಿತರಿದ್ದರು.
ಯುವ ಪತ್ರಕರ್ತ, ಫ್ಯಾಶನ್ ಕೋರಿಯೋಗ್ರಾಫರ್ ಸನಿಧ್ ಪೂಜಾರಿ ಪ್ರಸಕ್ತ ಕಾಮಗಾರಿಗಳ ಚಿತ್ರಣದ ಸ್ಲೈಡ್ಶೋ ನಿರ್ವಹಿಸಿದರು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಪ್ರಾರ್ಥನೆಯನ್ನಾಡಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.