ಮಂಗಳೂರು: "ಬಂಟ್ವಾಳ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಗೆಲ್ಲುವಂತೆ ರಮಾನಾಥ್ ರೈ ನನಗೆ ಸವಾಲು ಹಾಕಿದ್ದಾರೆ. ರಮಾನಾಥ್ ರೈ ಸವಾಲು ಸ್ವೀಕರಿಸಿದ್ದೇನೆ. ಮೂರು ದಿನ ಬಂಟ್ವಾಳ ಕ್ಷೇತ್ರದಲ್ಲಿ ವಿಸ್ತಾರಕನಾಗಿ ಕೆಲಸ ಮಾಡಲಿದ್ದೇನೆ. ಕಾರ್ಯಕರ್ತರ ಜೊತೆ ಸಭೆ ನಡೆಸಲಿದ್ದೇನೆ. ಮುಂದಿನ ಚುನಾವಣೆಯಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ಚುನಾವಣೆಗೆ ನಿಲ್ಲಿಸುತ್ತೇನೆ. ರೈ ವಿರುದ್ದ ಗೆಲ್ಲಿಸಿ ತೋರಿಸುತ್ತೇನೆ," ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿಕೆ ನೀಡಿದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, "ಮೊದಲೇ ರಮಾನಾಥ್ ರೈ ಆರೋಗ್ಯ ಸರಿಯಿಲ್ಲ. ರಮಾನಾಥ್ ರೈಗೆ ವಯಸ್ಸಾಗಿದೆ. ಅವರಿಗೆ ವಿಶ್ರಾಂತಿ ಬೇಕಾಗಿದೆ. ಮುಂದಿನ ಚುನಾವಣೆಯ ನಂತರ ಶಾಶ್ವತವಾಗಿ ವಿಶ್ರಾಂತಿ ನೀಡಲಿದ್ದೇವೆ," ಎಂದು ಅಪಹಾಸ್ಯ ಮಾಡಿದರು.