ಮಂಗಳೂರು: ದ.ಕ.ಜಿಲ್ಲಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಂದು ತಿಂಗಳ ಅವಧಿಯಲ್ಲಿ ನಡೆದ ವಿವಿಧ ಅಪರಾಧ ಪ್ರಕರಣಗಳನ್ನು ಬೇಧಿಸಿದ ಸಿಸಿಬಿ ತಂಡ, ಬಜಪೆ, ಉರ್ವ, ಕದ್ರಿ ಪೊಲೀಸ್ ಠಾಣೆಗಳ ತಂಡಗಳನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ರೂಪ್ ಕುಮಾರ್ ದತ್ತ ಅವರು ಶ್ಲಾಘಿಸಿದ್ದು, ಶನಿವಾರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸ್ಕಾರ ನೀಡಿ ಗೌರವಿಸಿದರು.
ಜೂ.11ರಂದು ಉಳ್ಳಾಲದಲ್ಲಿ ಆಸ್ಟೀನ್ ಮೇಲಿನ ಹಲ್ಲೆ ಪ್ರಕರಣವನ್ನು ಬೇಧಿಸಿ 4 ಮಂದಿಯ ಬಂಧನ, ಜೂ.7ರಂದು ಅಡ್ಯಾರ್ಪದವಿನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ 3ಮಂದಿಯ ಬಂಧನ, ಜೂ.23ರಂದು ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ವಿಫಲ ಯತ್ನ ಪ್ರಕರಣದಲ್ಲಿ ಇಬ್ಬರ ಬಂಧನ, ಮಂಗಳೂರಿನ ಲಾಡ್ಜ್ನಲ್ಲಿ 10 ಕೆ.ಜಿ.ಗಾಂಜಾ ವಶಪಡಿಸಿದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ ಸಿಸಿಬಿ ಎಸಿಪಿ ವೆಲೆಂಟೈನ್ ಡಿ'ಸೋಜಾ, ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಸುನಿಲ್ ನಾಯಕ್, ಎಸ್ಐ ಶ್ಯಾಮ್ ಸುಂದರ್ ಅವರನ್ನು ಅಭಿನಂದಿಸಿ ಪ್ರಶಂಸಾ ಪತ್ರ ಹಾಗೂ 50,000 ರೂ. ನಗದು ಪುರಸ್ಕಾರ ನೀಡಿ ಗೌರವಿಸಿದರು.