ಮಂಗಳೂರು : ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹ ಸಚಿವರಿಗೆ ಬರೆದ ಪತ್ರಕ್ಕೆ ದಕ್ಷಿಣ ಕನ್ನಡ ಎಸ್ ಡಿಪಿಐ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಈವರೆಗೆ ರಾಜ್ಯದಲ್ಲಿ 23 ಹಿಂದೂಗಳನ್ನು ಮುಸ್ಲಿಮರು ಕೊಂದಿದ್ದಾರೆ. ಮತ್ತು ಇವರಿಗೆ ಪಿಎಫ್ ಐ ಹಾಹೂ ಎಸ್ ಡಿಪಿಐ ಬೆನ್ನೆಲುಬಾಗಿ ನಿಂತಿದೆ ಎಂದು ಸುಳ್ಳು ಆರೋಪ ಮಾಡಿರುವ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಸ್ ಡಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ತಿಳಿಸಿದ್ದಾರೆ.ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದೆ ಶೋಭಾ, ಬದುಕುಳಿದಿರುವ ಮೂಡಬಿದರೆಯ ಅಶೋಕ್ ಪೂಜಾರಿಯನ್ನು ಕೊಲೆಯಾದವರ ಪಟ್ಟಿಯಲ್ಲಿ ಸೇರಿಸಿದ್ದಾರೆ.
ಇದರಿಂದ ಜಿಲ್ಲೆಯಲ್ಲಿ ಮತ್ತೆ ಅಶಾಂತಿಯ ವಾತಾವರಣ ಸೃಷ್ಟಿಯಾಗುವ ಅಪಾಯವಿದೆ.ಹಾಗಾಗಿ ಸಂಸದೆ ಶೋಭಾ ವಿರುದ್ಧ ರಾಜ್ಯ ಸರ್ಕಾರ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು. ಶೋಭಾ ಕರಂದ್ಲಾಜೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕಲ್ಲದೆ, ಸಂಸದೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಶೋಭಾ ಸಲ್ಲಿಸಿದ 23 ಮಂದಿ ಪಟ್ಟಿಯಲ್ಲಿ ಸುಮಾರು 18 ರಿಂದ 19 ಮಂದಿ ಆತ್ಮಹತ್ಯೆ, ವೈಯಕ್ತಿಕ ಕಲಹಗಳಲ್ಲಿ ಸಾವಿಗೀಡಾಗಿದ್ದಾರೆ.ಆದರೆ, ಅದನ್ನೆಲ್ಲಾ ಪಿಎಫ್ ಐ ಮತ್ತು ಎಸ್ ಡಿಪಿಐ ವಿರುದ್ಧ ಹೊರಿಸಿರುವುದು ಸಮಂಜಸವಲ್ಲ. ಹಾಗಾಗಿ ಕಾನೂನು ಸಲಹೆ ಪಡೆದು ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಇಕ್ಬಾಲ್ ಹೇಳಿದ್ದಾರೆ.