ಮಂಗಳೂರು: ರಾಜ್ಯದಲ್ಲಿ ನಡೆದ ಆರ್ಎಸ್ಸೆಸ್ ಹಾಗೂ ಹಿಂದೂ ಮುಖಂಡರ ಹತ್ಯೆ ಪ್ರಕರಣಗಳ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹಸಚಿವರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಭಾ ಅವರು ತಪ್ಪು ಮಾಹಿತಿ ನೀಡಿ ಜಿಲ್ಲೆಯಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ.
ಇದರ ವಿರುದ್ಧ ಸಂಸದೆ ವಿರುದ್ಧ ಪ್ರಕರಣ ದಾಖಲಿಸುವ ಬಗ್ಗೆ ಯೋಚಿಸಲಾಗುವುದು ಎಂದರು.ಶೋಭಾ ಅವರು ಕೇಂದ್ರ ಗೃಹ ಇಲಾಖೆಗೆ ಕೊಲೆಯಾದವರ ಬಗ್ಗೆ ನೀಡಿದ ಪಟ್ಟಿಯಲ್ಲಿ ಬದುಕಿರುವವರನ್ನು ಕೊಲ್ಲಲಾಗಿದೆ ಹಾಗೂ ಒಂದು ಸಮುದಾಯದವರ ಮಾತ್ರ ಹೆಸರಿದೆ ಹಾಗಾದರೆ ಬಾಕಿಯವರದ್ದು ಜೀವವಲ್ಲವೆ? ಅವರು ಒಂದು ಸಮುದಾಯಕ್ಕೆ ಮಾತ್ರ ಸಂಸದರೆ? ಈ ತಾರತಮ್ಯ ಏತಕ್ಕೆ? ಎಂದು ಪ್ರಶ್ನಿಸಿದರು.ಇದೇ ಸಂದರ್ಭ ಐವನ್ ಡಿಸೋಜ ವಿಧಾನ ಪರಿಷತ್ ಸದಸ್ಯರಾದ ಬಳಿಕ 3 ವರ್ಷ ಮಾಡಿದ ಸಾಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಪುಸ್ತಕವನ್ನು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಬಿಡುಗಡೆ ಮಾಡಿದರು.