ಮಂಗಳೂರು: ಮಂಗಳೂರಿನ ಕದ್ರಿ ಪಾರ್ಕ್ ನಲ್ಲಿ ಕಳೆದ 5 ವರ್ಷಗಳಿಂದ ಸ್ಥಗಿತಗೊಂಡಿದ್ದ ಮಕ್ಕಳ ಪುಟಾಣಿ ಚುಕು-ಬುಕು ರೈಲು ಬಾಲ ಮಂಗಳ ಎಕ್ಸ್ಪ್ರೆಸ್ ಮತ್ತೆ ಓಡುವ ದಿನಗಳು ಸನ್ನಿಹಿತವಾಗಿವೆ.ಕಳೆದ 5 ವರ್ಷಗಳಿಂದ ಇದು ಸ್ಥಗಿತಗೊಂಡಿದ್ದು, ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಿರಾಸಕ್ತಿಯಿಂದ ಮೂಲೆ ಸೇರಿದ್ದ ಈ ಪುಟಾಣಿ ರೈಲು ಮಕ್ಕಳ ಚಿಲಿಪಿಲಿ ಯೊಂದಿಗೆ ಮತ್ತೆ ಹಳಿಯ ಮೇಲೆ ಓಡಲಿದೆ.
ಶನಿವಾರ ಮಂಗಳೂರು ದಕ್ಷಿಣ ಶಾಸಕರಾದ ಜೆ.ಆರ್.ಲೋಬೊರವರು ಪುಟಾಣಿ ರೈಲು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಜೆ.ಆರ್. ಲೋಬೋ, "ಕದ್ರಿ ಪಾರ್ಕ್ ನ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದೆ," ಎಂದು ಹೇಳಿದರು.ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ ಸಂಚರಿಸುತ್ತಿದ್ದ ಈ ಹಳೇ ರೈಲನ್ನೇ ಕದ್ರಿ ಪಾರ್ಕ್ಗೆ ತರಲಾಗಿತ್ತು. ಕೇವಲ ಎರಡು ಬೋಗಿಗಳು ಇರುವ ಈ ರೈಲು 1975ರಲ್ಲಿ ತಯಾರಿಸಲಾಗಿದೆ.