(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)
ಮುಂಬಯಿ, ಆ.25: ಮಹಾನಗರ ಮುಂಬಯಿ ಇಲ್ಲಿನ ಮಾಟುಂಗಾ ಪರಿಸರದಲ್ಲಿ ಸುಮಾರು ಎಂಟು ದಶಕಗಳ ಹಿಂದೆ ಕನ್ನಡಾಭಿಮಾನಿಗಳಿಂದ ಸ್ಥಾಪಿಸಲ್ಪಟ್ಟ ಮುಂಬಯಿ ಕನ್ನಡ ಸಂಘದ ವತಿಯಿಂದ ಇಂದಿಲ್ಲಿ ಶುಕ್ರವಾರ ಅದ್ದೂರಿಯಾಗಿ ಗಣೇಶ ಚತುಥಿರ್ü ಸಂಭ್ರಮ ನೆರವೇರಿಸಲ್ಪಟ್ಟಿತು.
ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಸಂಘದ ಕಛೇರಿಯಲ್ಲಿ ಬೆಳಿಗ್ಗೆ ವಿವಿಧ ಪೂಜೆ, ಭಜನೆಗಳೊಂದಿಗೆ ತ್ರಿದಿನ ಪೂಜಿತ ಗಣೇಶನನ್ನು ಪ್ರತಿಷ್ಠಾಪಿಸಲಾಯಿತು. ನಂತರ ಪ್ರತಿಷ್ಠಾಪಿತ ಗಣೇಶನ ಆರಾಧನೆ, ಪೂಜೆ, ಆರತಿ, ಸಂಜೆ ಪೂಜೆ, ಮಹಾರತಿ ನಡೆಸಲಾಯಿತು. ಡಿ.ಆರ್ ರೇವಣ್ಕರ್ ಮತ್ತು ಜಯ ರೇವಣ್ಕರ್ ದಂಪತಿ ಪೂಜಾ ಯಜಮಾನತ್ವ ವಹಿಸಿದ್ದರು. ಪಿ.ಸುಬ್ರಾಯ ಶ್ಯಾನ್ಭಾಗ್ ಗೋರೆಗಾಂ, ಆರತಿ ಪ್ರಿಂಟರ್ಸ್ನ ಜಯರಾಜ್ ಪಿ.ಸಾಲ್ಯಾನ್, ಎ.ಪಿ ಕಿಣಿ, ಕಮಲಾಕ್ಷ ಜಿ.ಸರಾಫ್ ಸೇವಾರ್ಥ ವಿವಿಧ ಧಾರ್ಮಿಕ ಪೂಜೆಪುರಸ್ಕಾರಗಳು ನಡೆಸಲ್ಪಟ್ಟಿದ್ದು ಪುರೋಹಿತ ಸಂಜೀವ ಸಾಂಗ್ಳಿ ಆಚಾರ್ಯ ಪೂಜಾಧಿಗಳನ್ನು ನೆರವೇರಿಸಿ ಆಶೀರ್ವಚಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗುರುರಾಜ್ ಎಸ್.ನಾಯಕ್, ಉಪಾಧ್ಯಕ್ಷ ಡಾ| ಎಸ್.ಕೆ ಭವಾನಿ, ಗೌ| ಪ್ರ| ಕಾರ್ಯದರ್ಶಿ ಸತೀಶ್ ಎನ್.ಬಂಗೇರ, ಗೌರವ ಕೋಶಾಧಿಕಾರಿ ರಾಜೇಂದ್ರ ಆರ್.ಗಡಿಯಾರ್, ಜೊತೆ ಕಾರ್ಯದರ್ಶಿ ಸೋಮನಾಥ ಎಸ್.ಕರ್ಕೇರ, ವಾಚನಾಲಯಾಧಿಕಾರಿ ಎಸ್.ಕೆ ಪದ್ಮನಾಭ ಮತ್ತಿತರರು ಉಪಸ್ಥಿತರಿದ್ದರು.