ಮಂಗಳೂರು: ದೇರಾ ಸಚ್ಚಾ ಸೌದದ ಮುಖ್ಯಸ್ಥ, ಸ್ವಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಬಂಧನ, ಶಿಕ್ಷೆ, ದೇಶಾದ್ಯಂತ ಚರ್ಚೆಯಾಗುತ್ತಿದೆ. ಭಾರೀ ಜನ ಬೆಂಬಲ, ರಾಜಕೀಯ, ಅಧಿಕಾರಿ ವಲಯದಲ್ಲೂ ಪ್ರಭಾವಿಯಾಗಿದ್ದ ಸಿಂಗ್ ನನ್ನು ಜೈಲುಗಟ್ಟುವುದರ ಹಿಂದೆ ಸಿಬಿಐ ಅಧಿಕಾರಿಯೊಬ್ಬರು ಆಹೋರಾತ್ರಿ ಕಾರ್ಯಾಚರಣೆ ನಡೆಸಿರುವುದು ಬೆಳಕಿಗೆ ಬಂದಿದೆ.
ಕಾಸರಗೋಡು ಜಿಲ್ಲೆಯ ಉಪ್ಪಳ ಮುಳಿಂಜ ನಿವಾಸಿ ಮುಳಿಂಜ ನಾರಾಯಣನ್ (65) ಎಂಬವರೇ ಈ ಅಧಿಕಾರಿ.1970 ರಲ್ಲಿ ಕಾಸರಗೋಡಿನ ವಿದ್ಯಾನಗರ ಸರಕಾರಿ ಕಾಲೇಜಿನ ವಿಜ್ಞಾನ ಪದವಿ ಪಡೆದ ಬಳಿಕ ನಾರಾಯಣನ್ ರು ಸಿಬಿಐಗೆ ಸೇರ್ಪಡೆಯಾಗಿದ್ದರು. ಅವರು ಎಸ್.ಐ. ರ್ಯಾಂಕ್ ನಿಂದ ಸಿಬಿಐನಲ್ಲಿ ವೃತ್ತಿ ಜೀವನ ಆರಂಭಿಸಿದ್ದರು. ತಮ್ಮ ದಕ್ಷ ಸೇವೆಯಿಂದ ಭಡ್ತಿ ಪಡೆಯುತ್ತಾ ಹೋದ ಅವರು ಸಿಬಿಐ ಡಿಐಜಿ ಹುದ್ದೆಗೇರಿ ನಂತರ ಸೇವೆಯಿಂದ ನಿವೃತ್ತರಾಗಿದ್ದರು. ಸದ್ಯ ನಾರಾಯಣನ್ ರು ದೆಹಲಿಯಲ್ಲಿ ವಾಸವಾಗಿದ್ದಾರೆ.