ಮಂಗಳೂರು: ಮತಾಂತರಕ್ಕೆ ಯತ್ನ ನಡೆಸುತ್ತಿದ್ದಾನೆ ಎಂದು ಆರೋಪಿಸಿ ಕೊಲ್ಲಮೊಗ್ರು - ಕಲ್ಮಕಾರು ಗ್ರಾಮಸ್ಥರು ವ್ಯಕ್ತಿಯೋರ್ವನನ್ನು ಸೆರೆ ಹಿಡಿದು ಸುಬ್ರಹ್ಮಣ್ಯ ಪೊಲೀಸರಿಗೊಪ್ಪಿಸಿದ್ದಾರೆ.
ಕಲ್ಲುಗುಂಡಿ ನಿವಾಸಿ ದೊರೈರಾಜು ಆರೋಪಿ ಎನ್ನಲಾಗಿದೆ.ಕೊಲ್ಲಮೊಗ್ರು ಮತ್ತು ಕಲ್ಮಕಾರು ಪರಿಸರದ ಕೆಲವು ಮನೆಗಳಿಗೆ ಈತ ಆಗಾಗ್ಗೆ ಸಂಶಯಾಸ್ಪದವಾಗಿ ಭೇಟಿ ನೀಡುತ್ತಿದ್ದ.
ಹಿಂದೊಮ್ಮೆ ದಲಿತ ಸಮುದಾಯ ಸಹಿತ ಕೆಲವು ನಿರ್ದಿಷ್ಟ ಹಿಂದೂಗಳ ಮನೆಗಳಲ್ಲಿ ತೆರಳಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಗ್ರಾಮಸ್ಥರು ಎಚ್ಚರಿಕೆ ನೀಡಿ ಕಳುಹಿಸಿದ್ದರು.ಶನಿವಾರ ರಾತ್ರಿ ಭೇಟಿ ನೀಡಿದಾಗ ಗ್ರಾಮಸ್ಥರು ಆತನನ್ನು ವಿಚಾರಿಸಿ ಬ್ಯಾಗನ್ನು ಪರಿಶೀಲಿಸಿದರು.
ಈ ವೇಳೆ ಆರಾಧನಾಲಯ ಹೆಸರಿನೊಂದರ ಮೊಹರು, ರಶೀದಿ ಪುಸ್ತಕಗಳು ದೊರೆತವು. ಬಳಿಕ ಗ್ರಾಮಸ್ಥರು ಆರೋಪಿಯನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೊಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.ಆರೋಪಿ ತಮಿಳು ಜನಾಂಗದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದು, ಇದೇ ರೀತಿ ಹಿಂದೆ ಮತಾಂತರಕ್ಕೆ ಯತ್ನಿಸುತ್ತಿದ್ದ ವೇಳೆ ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ.