ಶ್ರೀ ರಾಮಚಂದ್ರ ದೇವರ ಮತ್ತು ಪ್ರತಿಷ್ಠಾಪಿತ ಮಹಾಗಣಪತಿ ದರ್ಶನ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)
ಮುಂಬಯಿ, ಸೆ.02: ಶಕತ್ಪುರಂ ಶ್ರೀ ವಿದ್ಯಾ ಪೀಠಮ್ ಅಲ್ಲಿನ ಶ್ರೀ ಜಗದ್ಗುರು ಬದರಿ ಶಂಕರಾಚಾರ್ಯ ಸಂಸ್ಥಾನಂನ ಪೀಠಾಧಿಪತಿ ಶ್ರೀ ಕೃಷ್ಣಾನಂದತೀರ್ಥ ಮಹಾಸ್ವಾಮಿಜಿ ಅವರು ಕಳೆದ ಶುಕ್ರವಾರ ಸಂಜೆ ಮಹಾರಾಷ್ಟ್ರದ ಅಯೋಧ್ಯನಗರಿ ಹೆಸರಾಂತ ಮುಂಬಯಿ ವಡಲಾ ಅಲ್ಲಿನ ಶ್ರೀ ರಾಮಮಂದಿರ ದ್ವಾರಕಾನಾಥ ಭವನಕ್ಕೆ ಆಗಮಿಸಿ ಶ್ರೀ ರಾಮಚಂದ್ರ ದೇವರ ಮತ್ತು ಪ್ರತಿಷ್ಠಾಪಿತ ಮಹಾಗಣಪತಿ ದರ್ಶನ ಪಡೆದರು.
ಜಿಎಸ್ಬಿ ಸಾರ್ವಜನಿಕ ಗಣೇಶೋತ್ಸವ ಉತ್ಸವ ಸಮಿತಿ ವಿಶ್ವಸ್ಥ ಕಾರ್ಯಾಧ್ಯಕ್ಷ ಎನ್.ಎನ್ ಪಾಲ್ ಮತ್ತು ಪದಾಧಿಕಾರಿಗಳು ಶ್ರೀಗಳಿಗೆ ಚೆಂಡೆವಾದ್ಯಗಳ ನೀನಾದ, ಕುಂಭಸ್ವಾಗತದೊಂದಿಗೆ ಸುಖಾಗಮನ ಬಯಸಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠ ಗೋವಾ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ ಹಾಗೂ ಪಟ್ಟಶಿಷ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ ಆಶೀರ್ವಚನ ಮತ್ತು ಮಾರ್ಗದರ್ಶನಗಳೊಂದಿಗೆ ಜಿಎಸ್ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಈ ಬಾರಿ 63ನೇ ವಾರ್ಷಿಕ ಸಾರ್ವಜನಿಕ ಗಣೇಶೋತ್ಸವ ನಡೆಸಲಾಗುತ್ತಿರುವ ಬಗ್ಗೆ ಪಾಲ್ ಮಾಹಿತಿಯನ್ನಿತ್ತು ಸ್ಮರಣಿಕೆಯನ್ನಿ ತ್ತು ಗೌರವಿಸಿದರು. ನಂತರ ಕೃಷ್ಣಾನಂದರು ನೆರೆದ ಸದ್ಭಕ್ತರನ್ನು ಉದ್ದೇಶಿಸಿ ಮಾತನಾಡಿ ಅನುಗ್ರಹಿಸಿದರು.
ಈ ಶುಭಾವಸರದಲ್ಲಿ ಜಿಎಸ್ಬಿ ಗಣೇಶೋತ್ಸವ ಉತ್ಸವ ಸಮಿತಿ ಅಧ್ಯಕ್ಷ ಉಲ್ಲಾಸ್ ಡಿ.ಕಾಮತ್, ಮುಖ್ಯ ಸಂಚಾಲಕ ಗೋವಿಂದ್ ಎಸ್.ಭಟ್, ಸುಭಾಶ್ ಪೈ, ಅಕ್ಷಯ್ ಎಂ.ಪೈ, ಸುನೀಲ್ ಪೈ, ಕಮಲಾಕ್ಷ ಜಿ.ಸರಾಫ್ ಸೇರಿದಂತೆ ನೂರಾರು ಸೇವಾಕರ್ತರು, ಭಕ್ತರು ಉಪಸ್ಥಿತರಿದ್ದರು.
ಈ ಬಾರಿಯ ವಾರ್ಷಿಕ ಗಣೇಶೋತ್ಸವವು ಸಾಂಸ್ಕೃತಿಕ ಹಾಗೂ ಧಾರ್ಮಿಕ ವೈವಿಧ್ಯತೆಗಲೊಂದಿಗೆ ಇದೇ ಸೆ.05ನೇ ಮಂಗಳವಾರ ಅನಂತ ಚತುರ್ಧಶಿ ದಿನ ಸಮಾಪ್ತಿ ಕಾಣಲಿದೆ ಎಂದು ಎನ್.ಎನ್ ಪಾಲ್ ತಿಳಿಸಿದರು.