ಮಂಗಳೂರು: ಬಿಜೆಪಿ ಯುವ ಮೋರ್ಚಾ ಸೆ.7ರಂದು ಹಮ್ಮಿಕೊಂಡ ಮಂಗಳೂರು ಚಲೋ ಬೈಕ್ ರಾಲಿಯನ್ನು ಕೈಬಿಡಬೇಕು ಎಂದು ಸಚಿವ ಯು.ಟಿ.ಖಾದರ್ ಮನವಿ ಮಾಡಿದ್ದಾರೆ.ಮಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ರ್ಯಾಲಿ, ಪ್ರತಿಭಟನೆಗಳಿಗೆ ಅವಕಾಶವಿದೆ.
ಆದರೆ ಬಿಜೆಪಿ ನಡೆಸುವ ರ್ಯಾಲಿಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಕಾರ್ಯಕರ್ತರು ಆಗಮಿಸುತ್ತಾರೆ. ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇದೆ. ರ್ಯಾಲಿಯನ್ನು ಜಿಲ್ಲೆಗೆ ಸೀಮಿತವಾಗಿ ನಡೆಸಲಿ. ಅದು ಬಿಟ್ಟು ಬೇರೆ ಜಿಲ್ಲೆಗಳಿಂದ ಆಹ್ವಾನಿಸಿ ಬೈಕ್ ರ್ಯಾಲಿ ನಡೆಸುವುದು ಸರಿಯಲ್ಲ. ಓರ್ವ ಸಹೋದರನಾಗಿ ಬಿಜೆಪಿಯವರಲ್ಲಿ ಈ ಮನವಿ ಮಾಡುತ್ತೇನೆ ಎಂದರು.
ರ್ಯಾಲಿಯಿಂದಾಗಿ ಏನಾದರೂ ಅನಾಹುತಗಳು ನಡೆದರೆ ಮತ್ತೆ ನಮ್ಮ ಸರಕಾರದ ಮೇಲೆಯೇ ಗೂಬೆ ಕೂರಿಸಲಾಗುತ್ತದೆ. ರ್ಯಾಲಿಗೆ ಮಕ್ಕಳನ್ನು ಕಳುಹಿಸುವ ತಾಯಂದಿರು ಸುರಕ್ಷತೆಯ ಬಗ್ಗೆ ಗಮನಹರಿಸುವುದು ಒಳಿತು. ಪೊಲೀಸ್ ಇಲಾಖೆ ಕೂಡ ರ್ಯಾಲಿಗೆ ಅನುಮತಿಯನ್ನು ನೀಡಬಾರದು ಎಂದು ಆಗ್ರಹಿಸಿದರು.