ಉಡುಪಿ: ಕುಂದಾಪುರ ತಾಲೂಕಿನ ಸಾಲಿಗ್ರಾಮದಲ್ಲಿ ಭಾನುವಾರ ರಾತ್ರಿ ಸುಮಾರು 9.15 ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇರುವ ಗ್ರೇಶನ್ ಲೋಬೊ ಮ್ಹಾಲಕತ್ವದ ಲೋಬೊ ಚಿಕನ್ ಸೆಂಟರಿಗೆ ಗ್ರಾಹಕರ ಸೋಗಿನಲ್ಲಿ ಬಂದ ದರೋಡೆಕೋರರು ಗ್ರೇಶನ್ ಲೋಬೊ ಅವರ ಕಣ್ಣಿಗೆ ಮೆಣಸಿನ ಪುಡಿ ಎರಚಿ ಬಳಿಕ ಅವರ ಕೈಗಳನ್ನು ಬಳ್ಳಿಯಿಂದ ಕಟ್ಟಿಹಾಕಿ ನಗದು ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.
ಗ್ರೇಶನ್ ಅವರ ತಮ್ಮ ಕೋಳಿಯ ತ್ಯಾಜ್ಯವನ್ನು ಹೊರಗಡೆ ಹಾಕಲು ಹೋಗಿದ್ದು ವಾಪಾಸು ಬಂದು ನೋಡುವಾಗ ಅಣ್ಣ ಗ್ರೇಶನ್ ಲೋಬೊ ನೆಲದಲ್ಲಿ ಬಿದ್ದಿದ್ದರು. ಕೂಡಲೇ ಸಹಾಯಕ್ಕಾಗಿ ಸ್ಥಳೀಯರನ್ನು ಕೂಗಿದ ಬಳಿಕ ಅಂಬುಲೆನ್ಸ್ ಮೂಲಕ ಗ್ರೇಶನ್ ಅವರನ್ನು ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಜ್ಞೆ ಬಂದ ಬಳಿಕವಷ್ಟೇ ಎಷ್ಟು ಮಂದಿ ದರೋಡೆ ಕೋರರು ಇದ್ದರು ಎನ್ನುವ ಸ್ಪಷ್ಟ ಮಾಹಿತಿ ಲಭಿಸಬೇಕಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಎರಡು ಮಂದಿ ಕತ್ತಲಿನಲ್ಲಿ ಒಡಿ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.
ಸ್ಥಳಕ್ಕೆ ಬ್ರಹ್ಮಾವರ ಸರ್ಕಲ್ ಹಾಗೂ ಕೋಟ ಪಿಎಸ್ ಐ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.