ಮಂಗಳೂರು: 'ಮಂಗಳೂರು ಚಲೋ' ಜಾಥಾ ವೇಳೆ ಪೊಲೀಸ್ ಅಧಿಕಾರಿಗೆ ಅವಾಜ್ ಹಾಕಿದ್ದ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ದೂರು ದಾಖಲಿಸಲಾಗಿದೆ.ಜಾಥಾ ವೇಳೆ ಬಂಧಿತರಾಗಿ ಬಿಜೆಪಿ ಮಹಿಳಾ ಕಾರ್ಯಕರ್ತರನ್ನು ಮಂಗಳೂರಿನ ಕದ್ರಿ ಗೋರಕ್ಷನಾಥ ಹಾಲ್ ಕೂಡಿ ಹಾಕಲಾಗಿತ್ತು.
ಠಾಣೆಯ ಇನ್ಸ್ ಪೆಕ್ಟರ್ ಮಾರುತಿ ನಾಯಕ್ ಇವರನ್ನು ಬಿಡುಗಡೆ ಮಾಡಿರಲಿಲ್ಲ. ಇದರಿಂದ ಆಕ್ರೋಶಿತರಾದ ನಳಿನ್ ಕುಮಾರ್ ಕಟೀಲ್ ಬಹಿರಂಗವಾಗಿ ಧಮ್ಕಿ ಹಾಕಿದ್ದರು. ಬೈಯುತ್ತಾ ಮೇಜು ಕುಟ್ಟಿ, ಪೊಲೀಸ್ ಅಧಿಕಾರಿಯ ಮೊಬೈಲ್ ಫೋನನ್ನೂ ಕಿತ್ತುಕೊಳ್ಳಲು ನಳಿನ್ ಮುಂದಾಗಿದ್ದರು.
ಈ ವಿಡಿಯೋ ವೈರಲ್ ಆಗಿ ಸಂಸದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.ಇದೀಗ ಮಾರುತಿ ನಾಯಕ್ ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 353ರ ಅಡಿಯಲ್ಲಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ನಳೀನ್ ಕುಮಾರ್ ಕಟೀಲ್ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.