ಮಂಗಳೂರು: ಸಾಮಾಜಿಕ ಸಮಾನತೆಯನ್ನು ಜಗತ್ತಿಗೆ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶ ಮನೆ ಮನೆಗೂ ತಲುಪುವಂತಾದರೆ ಸಾಮಾಜಿಕ ಸಾಮರಸ್ಯ ಶಾಶ್ವತವಾಗಿ ನೆಲೆಗೊಳ್ಳಲು ಸಾಧ್ಯ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಹಕಾರದೊಂದಿಗೆ ಕುದ್ರೋಳಿ ಕ್ಷೇತ್ರದ ಕೊರಗಪ್ಪ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಲಾದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ದಮನಿತ ಧ್ವನಿ ಒಂದು ಕಾಲದಲ್ಲಿ ದಮನಿತ ಸಮಾಜಕ್ಕೆ ಧ್ವನಿ ಇಲ್ಲದಂತಹ ಸಮಯದಲ್ಲಿ ಅವರಿಗೆ ಆಸರೆಯಾಗಿ ನಿಂತು, ಮನುಷ್ಯ ಪ್ರೀತಿಯೇ ಮೊದಲ ಧರ್ಮ ಎಂದು ಸಾರಿ ಹೇಳಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ದೇವಸ್ಥಾನ ಪ್ರವೇಶ ಇಲ್ಲದಂತಹ ಸಮಾಜವನ್ನು ಮುನ್ನಡೆಗೆ ತಂದು ಅವರ ಬದುಕಿಗೆ ಹೊಸ ದಾರಿ ತೋರಿದವರು ಅವರು. ಸಾಮಾಜಿಕ ವ್ಯವಸ್ಥೆಯನ್ನು ಅತ್ಯಂತ ಸದೃಢಗೊಳಿಸುವ ನೆಲೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳಿಂದ ಸಾಮಾಜಿಕ ಕ್ರಾಂತಿ ನಡೆದಿದೆ ಎಂದವರು ವಿವರಿಸಿದರು.