ಮಂಗಳೂರು: ವಿದ್ಯಾರ್ಥಿನಿ ಕಾವ್ಯಾ ಪೂಜಾರಿ ನಿಗೂಢ ಸಾವು ಪ್ರಕರಣದ ಉನ್ನತ ಮಟ್ಟದ ತನಿಖೆ ನಡೆಸಬೇಕು ಹಾಗೂ ಶೈಕ್ಷಣಿಕ ಹತ್ಯೆಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ನಿಯಮ ಉಲ್ಲಂಘಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಲಗಾಮು ವಿಧಿಸಬೇಕು ಎಂದು ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳ ವೇದಿಕೆ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂದುಗಡೆ ಸೋಮವಾರ ಸಾಮೂಹಿಕ ಧರಣಿ ನಡೆಯಿತು.
ಮಹಿಳಾಪರ ರಾಜ್ಯ ಹೋರಾಟಗಾರರಾದ ಕೆ.ಎಸ್. ವಿಮಲಾ ಅವರು ಮಾತನಾಡಿ, ವಿದ್ಯಾರ್ಥಿನಿ ಕಾವ್ಯಾ ಪೂಜಾರಿ ನಿಗೂಢ ಸಾವು ನಡೆದು ಇಷ್ಟು ದಿನಗಳಾದರೂ ಕಾವ್ಯಾ ಕುಟುಂಬಕ್ಕೆ ಇನ್ನೂ ನ್ಯಾಯ ದೊರಕಿಲ್ಲ. ಘಟನೆಯ ತನಿಖೆ ನಡೆಸುವ ಕಾರಣದಿಂದ ಜಿಲ್ಲಾಡಳಿತ ರಚಿಸಿರುವ ಸಮಿತಿಯ ವರದಿಯನ್ನು ಒಂದು ತಿಂಗಳೊಳಗೆ ಸಾರ್ವಜನಿಕರೆದುರು ಬಹಿರಂಗಗೊಳಿಸಬೇಕು ಹಾಗೂ ಇಲ್ಲಿಯವರೆಗೆ ನಡೆದ ತನಿಖೆಯ ವರದಿಯನ್ನು ಸಾರ್ವಜನಿಕರ ಮುಂದೆ ತತ್ಕ್ಷಣವೇ ಸಂಬಂಧ ಪಟ್ಟವರು ಪ್ರಸ್ತುತಪಡಿಸಬೇಕು ಎಂದವರು ಆಗ್ರಹಿಸಿದರು