ಉಳ್ಳಾಲ: ಮಹಿಳೆಯರ ಸಬಲೀಕರಣಕ್ಕಾಗಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಪ್ರತಿ ಗ್ರಾಮಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಮಹಿಳೆಯರು ಸ್ವಉದ್ಯೋಗದ ಮೂಲಕ ಜೀವನ ರೂಪಿಸಿಕೊಳ್ಳುವ ಉದ್ದೇಶ ಇಟ್ಟುಕೊಂಡು ಹಮ್ಮಿಕೊಂಡಿರುವ ಕಾರ್ಯಕ್ರಮವಾಗಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ರಶೀದಾ ಭಾನು ಅಭಿಪ್ರಾಯಪಟ್ಟರು.
ಅವರು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಬೆಳ್ಮ ರೆಂಜಾಡಿ ಕೇಂದ್ರ ಜುಮಾ ಮಸೀದಿ ಮದರಸ ಕಟ್ಟಡದಲ್ಲಿ ಗುರುವಾರ ಅಯೋಜಿಸಿದ ಟೈಲರಿಂಗ್ ತರಬೇತಿ ಶಿಬಿರ "ವಿನ್ಯಾಸ ಟೈಲರಿಂಗ್ ಸೆಂಟರ್" ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಆರು ತಿಂಗಳ ಕಾಲ ಸತತ ಪ್ರಯತ್ನ ಪಟ್ಟು ತರಬೇತಿ ಪಡೆದುಕೊಂಡು ತರಬೇತಿ ಪಡೆಯುವವರು ಉತ್ತಮ ಟೈಲರ್ಗಳಾಗಬೇಕಿದೆ. ಪ್ರತಿ ಗ್ರಾಮಗಳಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಟ್ಯಾಲೆಂಟ್ ರಿಸರ್ಚ್ ಫೌಂಡೇಷನ್ನಿನ ಕಾರ್ಯಕ್ರಮ ಸಮಾಜಕ್ಕೆ ಪೂರಕ ಎಂದರು.
ಬೆಳ್ಮ ಗ್ರಾ.ಪಂ ಅಧ್ಯಕ್ಷ ವಿಜಯ ಕೃಷ್ಣ ಪೂಜಾರಿ ತರಬೇತಿಯನ್ನು ಉದ್ಘಾಟಿಸಿದರು.
ಬೆಳ್ಮ ಗ್ರಾ.ಪಂ ಸದಸ್ಯೆ ಶರ್ಮಿಳಾ , ಆಸರೆ ವುಮೆನ್ಸ್ ಫೌಂಡೇಶನ್ ಸ್ಥಾಪಕ ಅಧ್ಯಕ್ಷೆ ಶಬೀನ ಅಖ್ತಾರ್, ಬೆಳ್ಮ ಗ್ರಾ.ಪಂ ಸದಸ್ಯೆ ರಝೀಯಾ, ಸುಹೈಲ ಉಸ್ಮಾನ್, ಮರಿಯಮ್, ಟೈಲರಿಂಗ್ ಶಿಕ್ಷಕಿ ಆಯಿಷಾ, ಸಹನ ವುಮೆನ್ಸ್ ಕೌನ್ಸಿಲಿಂಗ್ನ ಖೈರುನ್ನೀಸ ಸೆಯ್ಯದ್, ಸದಸ್ಯೆ ರೆಷ್ಮಾ ಉಪಸ್ಥಿತರಿದ್ದರು.
ಮುಮ್ತಾಝ್ ಸ್ವಾಗತಿಸಿ ವಂದಿಸಿದರು. ಅತಿಕಾ ರಫೀಕ್ ಕಾರ್ಯಕ್ರಮ ನಿರ್ವಹಿಸಿದರು.