ಮುಂಬಯಿ, ಅ.06: ಸರ್ವ ದೇವದೇವಿಯರ ನೆಲೆಯಾದ ಡಿವೈನ್ ಪಾರ್ಕ್ ಎಂಬುದು ವೀರ ವೇದಾಂತಿ ವಿಶ್ವಮಾನವ ಸ್ವಾಮಿ ವಿವೇಕಾನಂದರು ದೇಹಾತೀತರಾಗಿ ಜಾಗೃತ ಚೇತನರೂಪದಿಂದ ಶ್ರೀ ಗುರೂಜೀ ಎನಿಸಿಕೊಂಡು ಸ್ವತಃ ನಿರ್ದೇಶಿಸಿ ಕಟ್ಟಿಸಿ ಕೊಂಡಂತಹ ಆಧ್ಯಾತ್ಮಿಕ ಪ್ರಯೋಗ ಶಾಲೆ. ಕಳೆದ 31 ವರ್ಷಗಳಿಂದ ಈ ಕ್ಷೇತ್ರವು ಜಗದಗಲ ಹಬ್ಬಿದ ವಿವೇಕ ಜಾಗ್ರತ ಬಳಗಗಳ ಮೂಲಕ `ವ್ಯಕ್ತಿತ್ವ ನಿರ್ಮಾಣ-ಲೋಕೋದ್ಧಾರ' ಈ ಎರಡು ಪವಿತ್ರ ಗುರಿಗಳತ್ತ ದುಡಿಯುತ್ತ ಬಂದಿದೆ. ಮುಂಬಯಿ ಮಹಾನಗರದ ಹತ್ತು ವಿವೇಕ ಜಾಗ್ರತ ಬಳಗಗಳು ಕೂಡಾ ಅದೇ ರೀತಿ ಅತ್ಮೋನ್ನತಿ ಶಿಬಿರ, ಶ್ರೀಸುಧಾ, ನಂದಾದೀಪ, ಚಿಂತನ ಮಂಥನ ಶಿಬಿರ, ಜೀವಶಿವಸೇವೆ ಹಾಗೂ ಸತ್ಸಂಗಗಳನ್ನು ಏರ್ಪಡಿಸಿ ಜನಮನ ಗೆದ್ದಿರುವರು. ಶ್ರೀಗುರೂಜೀ ನೀಡಿದ ಆಧ್ಯಾತ್ಮಿಕ ವಿಚಾರಗಳನ್ನು ಮನೆಮನೆಗಳಿಗೆ ತಲಪಿಸುವುದರಲ್ಲೇ ತಾವುಂಡ ಕೃಪೆಯನ್ನು ಇತರರಿಗೆ ಹಂಚುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿರುವರು.
ಈ ಮೊತ್ತಮೊದಲ ಬಾರಿಗೆ ಇದೇ ಅ.8ರ ಆದಿತ್ಯವಾರ ಸಂಜೆ 4 ರಿಂದ 7 ರವರೆಗೆ `ಭಕ್ತಿಭಾವ ಸಿಂಚನ' ಎಂಬ ಹೃನ್ಮನ ಸಿಂಚಕ, ಭಕ್ತಿ ಪ್ರಚೋದಕ, ಕರ್ಣಾನಂದಕಾರಕ ದಿವ್ಯ ಗಾನಾಮೃತದ ಪರಮಾದ್ಭುತ ಅನನ್ಯ ನೃತ್ಯ ಭಜನೆ-ಭಾವೋನ್ಮಾದ ಕಾರ್ಯಕ್ರಮಗಳ ಸಂಗಮವನ್ನು ಶ್ರೀ ಗುರು ನಾರಾಯಣ ಸಭಾಗೃಹ, ಬಿಲ್ಲವ ಭವನ, ಸಾಂತಾಕ್ರೂಜ್ ಪೂರ್ವ, ಮುಂಬಯಿ ಇಲ್ಲಿ ವಿಶಿಷ್ಟವಾಗಿ ಆಯೋಜಿಸಲಾಗಿದೆ.
ಭಜನೆ ಹಾಗೂ ಭಾವೋನ್ಮಾದ ಕಾರ್ಯಕ್ರಮಗಳ ಮೂಲಕ ಆಧ್ಯಾತ್ಮಿಕ ರಸದೌತಣ ನೀಡಲಿದ್ದಾರೆ. ಭಜನೆ ಎಂಬುದು ಭಕ್ತ ಮತ್ತು ದೇವರನ್ನು ಬೆಸೆಯುವ ಕೊಂಡಿ. ಭಕ್ತಿಯ ಭಾವ ಹೆಚ್ಚಿದಾಗ ಭಜನೆಗೆ ಸಾರ್ಥಕ್ಯ ಬರುತ್ತದೆ. ಭವಸಾಗರದಿಂದ ಜವದಲ್ಲಿ ನೆಗೆಯಲು ದಾರಿ ಮಾಡುವ ಭಜನೆಯೇ ಭಕ್ತಿಯೋಗದ ಜೀವಾಳ. `ಆಂತರ್ಯದ ಕಸ'ವನ್ನು ಬರಿದು ಮಾಡಿಕೊಳ್ಳುವ ಭಾವುಕ ವಿಧಾನ.
ಶ್ರೀ ಗುರೂಜೀಯವರೇ ಆರಿಸಿದಂತಹ ತ್ರಿವಳಿ ರತ್ನಗಳಾದ ಜಗದೀಶ್ ಕುಂದರ್, ಪ್ರೇಮಕಲಾ ಮಲ್ಯ ಮತ್ತು ಡಾ| ಶ್ರೀಪತಿ ರಾವ್ ಹಾಡುಗಾರರಾಗಿದ್ದು, ತ್ಯಾಗ-ಸೇವೆ ಮತ್ತು ಗುರುಮಹಿಮೆ ಹಾಗೂ ಸರ್ವ ಸಮರ್ಪಣಾ ಭಾವದಿಂದ ಮನುಷ್ಯ ಹೇಗೆ ಮೇಲೇರಬಹುದು ಎಂಬ ವಿಚಾರದ ಬಗ್ಗೆ ಸುದೇಶ್ ರಾವ್ ಮಣಿಪಾಲ ಅವರು ಮಾತನಾಡಲಿದ್ದಾರೆ.
ಈ ಆಧ್ಯಾತ್ಮಿಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಾಡಿನ ಸಮಸ್ತ ಭಕ್ತಾಭಿಮಾನಿಗಳು ಸಹಭಾಗಿಗಳಾಗುವಂತೆ ಭಕ್ತಿಯನ್ನು ಪೆÇೀಷಿಸಿ, ಶ್ರದ್ಧೆಯನ್ನು ಬಲವಾಗಿಸಿ, ವ್ಯಾಕುಲತೆಯನ್ನು ತೀವ್ರಗೊಳಿಸಿರಿ ಎಂದು ಬಯಸಿ ಡಿವೈನ್ ಸ್ಪಾರ್ಕ್ ಮುಂಬಯಿ 10 ವಿವೇಕ ಜಾಗ್ರತ ಬಳಗಗಳ ಪರವಾಗಿ ಕಾರ್ಯದರ್ಶಿ ಡಾ| ಶ್ರೀಪತಿ ರಾವ್ ಈ ಮೂಲಕ ತಿಳಿಸಿದ್ದಾರೆ.