ಕವಿ ಗೋಪಾಲ್ ತ್ರಾಸಿ ಅವರ `ಬೇಚಾರ ಶಹರು' ಕವನ ಸಂಕಲನ ಬಿಡುಗಡೆ
(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ಅ.17: ಮುಂಬಯಿ ಮಹಾನಗರದ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ, ಕವಿ ಸಾ.ದಯಾ (ದಯಾನಂದ್ ಸಾಲ್ಯಾನ್) ಅವರ ಪ್ರಥಮ ಕಥಾ ಸಂಕಲನ `ಪಾಟಕ್' ಮತ್ತು ಕವಿ, ಕತೆಗಾರ ಗೋಪಾಲ ತ್ರಾಸಿ ಅವರ ಮೂರನೇ ಕವನ ಸಂಕಲನ `ಬೇಚಾರ ಶಹರು' ಕೃತಿಗಳು ಇಂದಿಲ್ಲಿ ಭಾನುವಾರ ಪೂರ್ವಾಹ್ನ ಬೆಂಗಳೂರು ಜೆ.ಪಿ ನಗರದ ಕಪ್ಪಣ್ಣ ಅಂಗಳದಲ್ಲಿ ಬಿಡುಗಡೆ ಗೊಂಡವು.
ಜಯಲಕ್ಷಿ ್ಮೀ ಪಾಟೀಲ್ ಸಂಚಾಲಕತ್ವದಲ್ಲಿ ನಡೆಸಲಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಡಿನ ಹೆಸರಾಂತ ವಿಮರ್ಶಕ ಡಾ| ಎಸ್.ಆರ್ ವಿಜಯಶಂಕರ ಸುವರ್ಣಗಿರಿ ಪ್ರಕಾಶನ ಮಂಗಳೂರು ಪ್ರಕಟಿತ `ಪಾಟಕ್' ಕೃತಿಯನ್ನು ಕವಿ ಡಾ| ಹೆಚ್. ಎಲ್ ಪುಷ್ಪಾ ಮತ್ತು ಇರುವೆ ಪ್ರಕಾಶನ ಮಂಗಳೂರು ಪ್ರಕಾಶಿತ `ಬೇಚಾರ ಶಹರು' ಕೃತಿಯನ್ನು ಕತೆಗಾರ ನಾಗರಾಜ್ ವಸ್ತಾರೆ ಅನಾವರಣ ಗೊಳಿಸಿದರು.
ಮುಂಬಯಿಯಲ್ಲಿ ಆಕರ್ಷಣೆ ಮತ್ತು ವಿಕರ್ಷಣೆಗಳಿವೆ. ಅವುಗಳ ನಡುವೆ ಬದುಕುವುದುದಕ್ಕೆ, ಸಹ ಮಾಡಿಕೊಳ್ಳುವುದಕ್ಕೆ, ಉಸಿರಾಟ ಮಾಡುವುದಕ್ಕೆ ಸಾಹಿತ್ಯದ ಅಗತ್ಯವಿದೆ. ಈ ಎರಡೂ ಲೇಖಕರ ಕೃತಿಗಳನ್ನು ಗಮನಿಸಿದಾಗ ಅನುಭವಕ್ಕೆ ಬರುತ್ತದೆ. ತಾವೂ ತಮ್ಮನ್ನು ಕಂಡುಕೊಳ್ಳುವುದಕ್ಕೆ ಅಸ್ಮಿತೆಯನ್ನು ಕಂಡುಕೊಳ್ಳುವುದಕ್ಕೆ ಇವರಿಗೆ ಸಾಹಿತ್ಯ ಅನಿವಾರ್ಯ. ಎಲ್ಲಾ ರೀತಿಯಲ್ಲಿ ವಲಸೆ ಬರುವವರನ್ನು ಸಮಾನವಾಗಿ ಕಾಣುವ ಮನೋಭಾವ ಮುಂಬಯಿಗಿದೆ ಆದರೆ ಇದು ಬೆಂಗಳೂರಿನಲ್ಲಿ ಇಲ್ಲ ಎಂದು ಎಸ್.ಆರ್ ವಿಜಯಶಂಕರ ತಿಳಿಸಿದರು.
ಇಲ್ಲಿನ ಕವಿತೆಗಳಲ್ಲಿ ಬದುಕು ನಿತ್ಯ ಜೀವನದ ಯಾಂತ್ರಿಕತೆ ಇಲ್ಲಿ ಬಿಚ್ಚಿಕೊಳ್ಳುವುದನ್ನು ನಾವೂ ಕಾಣಬಹುದು. ಜನಸಾಮಾನ್ಯರ ಭಾಷೆಗಳನ್ನು ಕಟ್ಟಿಕೊಂಡೆ ಲೋಕವನ್ನು ಕಟ್ಟಿಕೊಡುವ ರೀತಿ ಮೆಚ್ಚುಗೆ ಗಳಿಸುತ್ತದೆ. ಇಲ್ಲಿ ಕೆಲವೊಂದು ಪ್ರಯೋಗಶೀಲ ರಚನೆಗಳು ಕೂಡ ಪ್ರಿಯವಾಗುತ್ತದೆ ಎಂದು ಹೆಚ್. ಎಲ್ ಪುಷ್ಪಾ ತಿಳಿಸಿದರು.
ನಾಗರಾಜ್ ವಸ್ತಾರೆ ಮಾತನಾಡಿ ಇಲ್ಲಿನ ಕತೆಗಳು ಚೆನ್ನಾಗಿ ಓದಿಸಿಕೊಳ್ಳುತ್ತದೆ. ಕನ್ನಡವನ್ನು ದುಡಿಸಿಕೊಳ್ಳುವ ಪರಿ ತುಂಬಾ ಖುಷಿಕೊಡುತ್ತದೆ. ಓದಿ ಆದ ಮೇಲೆ ಹೊಸ ಹೊಸ ಅರ್ಥವನ್ನು ಇಲ್ಲಿನ ಕತೆಗಳು ಕೊಡುತ್ತವೆ ಎಂದು ನುಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಯೋಜಕ ಈ ಹೊತ್ತಿಗೆಯ ಜಯಲಕ್ಷ್ಮೀ ಪಾಟೀಲ್ ಮತ್ತು ಪಾಟೀಲ್ ಪರಿವಾರ, ಉಷ್ ರೈ, ಗಿರಿಧಾರ ಕಾರ್ಕಳ, ಕೃಷ್ಣಮೂರ್ತಿ ಕವತ್ತಾರ್, ರಘುವೀರ ಭಟ್, ಸತೀಶ್ ಪಿ.ಪಿ, ಭಾಸ್ಕರ ಸರಪಾಡಿ, ಶ್ರೀನಿವಾಸ್ ಜಿ.ಕಪ್ಪಣ್ಣ, ಚೇತನಾ ಭಟ್, ಸಂಜೀವ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ತೇಜಸ್ವಿನಿ ಹೆಗ್ಗಡೆ ಸ್ವಾಗತಿಸಿದರು. ಕವಿ ಆನಂದ ಕುಂಚನೂರ ಕಾರ್ಯಕ್ರಮ ನಿರೂಪಿಸಿದರು. ಸಹನಾ ಹೆಗ್ಡೆ ವಂದಿಸಿದರು.