ಮಂಗಳೂರು: ಕಾಂಗ್ರೆಸ್ ನೇತೃತ್ವದ ಸರಕಾರ ನವಕರ್ನಾಟಕ ನಿರ್ಮಾಣದತ್ತ ಸದೃಢ ಹೆಜ್ಜೆ ಇಟ್ಟಿದೆ.ಮುಂದಿನ ಐದು ವರ್ಷಗಳ ಅವಧಿಗೆ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಜನತೆ ಆಶೀರ್ವದಿಸಬೇಕು. ಆ ಮೂಲಕ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ 252.50 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಪ್ರಣಾಳಿಕೆಯ ಭರವಸೆಗಳ ಹೊರತಾಗಿ ರೈತರ ಸಾಲ ಮನ್ನಾ, ಇಂದಿರಾ ಕ್ಯಾಂಟೀನ್, ಅನಿಲಭಾಗ್ಯ, ಮಾತೃಪೂರ್ಣ ಮುಂತಾದ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ ಇನ್ನೂ 300 ಇಂದಿರಾ ಕ್ಯಾಂಟೀನ್ಗಳು ಸದ್ಯದಲ್ಲೇ ಆರಂಭವಾಗಲಿವೆ. ಮಂಗಳೂರಿನಲ್ಲಿ ಐದು ಹಾಗೂ ಬಂಟ್ವಾಳದಲ್ಲಿ ಒಂದು ಇಂದಿರಾ ಕ್ಯಾಂಟೀನ್ ತೆರೆಯಲಾಗುವುದು ಎಂದರು.ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸಾವಿರಾರು ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಂಡಿವೆ.
ಇದೇ ಮಾದರಿ ಅಭಿವೃದ್ಧಿ ಯೋಜನೆಗಳು ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲೂ ಅಗಿವೆ. ಎಲ್ಲರನ್ನು ಒಳಗೊಂಡ ಅಭಿವೃದ್ಧಿ ಕಾಂಗ್ರೆಸ್ನ ಧ್ಯೇಯ. ರಾಜ್ಯದಲ್ಲಿ ರೈತರ ತಲಾ 50,000 ರೂ. ಮನ್ನಾ ಮಾಡಿ ಅವರನ್ನು ಸಾಲದ ಹೊರೆಯಿಂದ ಪಾರು ಮಾಡಿದೆ. ಇದಕ್ಕಾಗಿ ಸರಕಾರ 8,100 ಕೋ.ರೂ. ನೀಡಿದೆ. ಪರಿಶಿಷ್ಟ ಜಾತಿ, ಪಂಗಡದ ಉನ್ನತಿಗಾಗಿ ಶೇ 24.1ರಷ್ಟು ಅನುದಾನ ಮೀಸಲಿರಿಸಿದೆ. ಆ ಮೂಲಕ ಕರ್ನಾಟಕವನ್ನು ಅಭಿವೃದ್ಧಿಯ ಹೊಸ ದಿಕ್ಕಿನಲ್ಲಿ ಮುನ್ನಡೆಸಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.ಈ ಸಂದರ್ಭ ಸಚಿವರಾದ ಡಾ| ಎಚ್.ಸಿ. ಮಹದೇವಪ್ಪ, ಆರ್. ರೋಶನ್ ಬೇಗ್, ಟಿ.ಬಿ. ಜಯಚಂದ್ರ, ಯು.ಟಿ. ಖಾದರ್, ಈಶ್ವರ ಬಿ. ಖಂಡ್ರೆ, ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ'ಸೋಜಾ, ಶಾಸಕರಾದ ಅಭಯಚಂದ್ರ, ಜೆ.ಆರ್. ಲೋಬೊ, ಕೆ. ಶಕುಂತಾಳ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.