ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಅ. 29ರಂದು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುವ ಸಾಧ್ಯತೆ ಇರುವುದರಿಂದ ತುಳುವರ ಬೇಡಿಕೆಯನ್ನು ಪ್ರಧಾನಿಗೆ ತಲುಪಿಸಲು ತುಳುನಾಡು ಯೂನಿಫಿಕೇಶನ್ ಸಂಘಟನೆಯು ಇನ್ನೊಂದು ಟ್ವಿಟರ್ ಅಭಿಯಾನಕ್ಕೆ ಮುಂದಾಗಿದೆ. ಇದರಲ್ಲಿ ಎಲ್ಲ ಟ್ವೀಟ್ಗಳನ್ನು ರಾಜ್ಯವನ್ನು ಪ್ರತಿನಿಧಿಸುವ ಸಂಸದರಿಗೆ ಟ್ಯಾಗ್ ಮಾಡಲು ನಿರ್ಧರಿಸಲಾಗಿದೆ.
ಅ. 29ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ಇದೇ ವೇಳೆ ದ.ಕ.ಜಿಲ್ಲೆಗೂ ಬರುವ ಸಾಧ್ಯತೆ ಇರುವುದರಿಂದ ಸಂಘಟನೆಯು ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು ಸೇರಿದಂತೆ ತುಳುವರ ಬೇಡಿಕೆಯನ್ನು ಪ್ರಧಾನಿಯವರ ಮುಂದಿಡಲು ಸಾಮಾಜಿಕ ತಾಣ ಟ್ವೀಟರನ್ನು ಬಳಸಿಕೊಂಡಿದೆ.ಅ. 28 ಮತ್ತು 29ರಂದು ಟ್ವೀಟರ್ ಅಭಿಯಾನ ನಡೆಯಲಿದ್ದು, ಯಾವುದೇ ಟಾರ್ಗೆಟ್ ಇಡಲಾಗಿಲ್ಲ. ಯಾರು ಬೇಕಾದರೂ ಭಾಗವಹಿಸಬಹುದು. ಮಾಡಿದ ಎಲ್ಲ ಟ್ವೀಟ್ಗಳನ್ನು ರಾಜ್ಯದ ಸಂಸದರಿಗೆ ಟ್ಯಾಗ್ ಮಾಡಲಾಗುತ್ತದೆ. ಪ್ರಮುಖವಾಗಿ ಜಿಲ್ಲೆಯ ನಾಯಕರಾದ ಡಿ.ವಿ. ಸದಾ ನಂದ ಗೌಡ, ನಳಿನ್ ಕುಮಾರ್ ಕಟೀಲು ಅವರಿಗೆ ಟ್ಯಾಗ್ ಮಾಡಿ ತುಳುನಾಡಿನ ಧ್ವನಿಯನ್ನು ಪ್ರಧಾನಿಯವರಿಗೆ ತಲುಪಿಸುವ ಪ್ರಯತ್ನ ನಡೆಯಲಿದೆ.