ಮಂಗಳೂರು: ಕಾಡು ಹಂದಿಯ ದಾಳಿಗೆ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಪುತ್ತಿಲ ಗ್ರಾಮದ ಮಡಪ್ಪಾಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಶಾಂತಪ್ಪ ಪೂಜಾರಿ ಅವರ ಪುತ್ರ ಗಂಗಾಧರ್ ಪೂಜಾರಿ (44) ಎಂಬವರು ಬಳ್ಳಿ ತರಲು ಕಾಡಿಗೆ ತೆರಳಿದ್ದರು. ಆದರೆ ಸಂಜೆಯಾದರೂ ಗಂಗಾಧರ ಪೂಜಾರಿ ಮನೆಗೆ ಮರಳಿರಲಿಲ್ಲ .
ಈ ಹಿನ್ನೆಲೆಯಲ್ಲಿ ಮನೆಯವರು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಕಾಡಿನಲ್ಲಿ ಹುಡುಕಾಟ ನಡೆಸುವ ಸಂದರ್ಭದಲ್ಲಿ ನೀರು ಹರಿಯುವ ತೊರೆಯ ಬಳಿ ಗಂಗಾಧರ್ ಪೂಜಾರಿ ಅವರ ಮೃತದೇಹ ಪತ್ತೆಯಾಗಿದೆ.ಈ ಬಗ್ಗೆ ಮೃತರ ಪತ್ನಿ ಜಯಶ್ರೀ ಎಂಬುವರು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ತನ್ನ ಗಂಡ ಕಾಡು ಹಂದಿ ತಿವಿದು ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.