ಮಂಗಳೂರು: ಹಾವು ಕಡಿತದಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಯೋಧ ಸಂತೋಷ್ ಕುಮಾರ್ ಗೆ ಚಿಕಿತ್ಸೆ ಕೊಡಿಸಿ ಆಹಾರ ಮತ್ತು ನಾಗರಿಕ ಸಚಿವ ಯು.ಟಿ.ಖಾದರ್ ಮಾನವೀಯತೆ ಮೆರೆದಿದ್ದಾರೆ.ಕಾಶ್ಮೀರದಲ್ಲಿ ಉಗ್ರರ ಜೊತೆ ಮುಖಾಮುಖಿಯಲ್ಲಿ ಗಾಯಗೊಂಡು ವಿಶ್ರಾಂತಿಗಾಗಿ ಸ್ವಗ್ರಾಮ ಮುಡಿಪು ಬಳಿಯ ಕೊಡಕಲ್ಲುಗೆ ಬಂದಿದ್ದ ಸೈನಿಕ ಸಂತೋಷ್ ಕುಮಾರ್ ಅವರಿಗೆ ನವೆಂಬರ್ 05ರ ಭಾನುವಾರ ಮಧ್ಯರಾತ್ರಿ ಹಾವು ಕಚ್ಚಿದೆ, ಕೂಡಲೆ ಅವರ ಕುಟುಂಬ ಸದಸ್ಯರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಸೇರಿಸಿದ್ದಾರೆ, ಆದರೆ ಆಸ್ಪತ್ರೆಯಲ್ಲಿ ಸೂಕ್ತ ಚುಚ್ಚುಮದ್ದು ಇರದ ಕಾರಣ ಚಿಕಿತ್ಸೆ ನಡೆಯದೆ ಸಂತೋಷ್ ಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.
ಸಂತೋಷ್ ಕುಟುಂಬ ಸದಸ್ಯರು ಬೇರೆ ದಾರಿ ಕಾಣದೆ ಯು.ಟಿ.ಖಾದರ್ ಅವರನ್ನು ಸಂಪರ್ಕಿಸಿದ್ದಾರೆ, ವಿಷಯ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಸಚಿವ ಖಾದರ್, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಿಂದ ಚಿಕಿತ್ಸೆಗೆ ಅವಶ್ಯಕವಾಗಿದ್ದ 10 ಚುಚ್ಚುಮದ್ದುಗಳನ್ನು ತರಿಸಿ ಸಂತೋಷ್ ಅವರ ಜೀವ ಉಳಿಯಲು ನೆರವಾಗಿದ್ದಾರೆ.ಕೆಲ ದಿನಗಳ ಹಿಂದೆಯಷ್ಟೆ ವೃದ್ಧ ದಂಪತಿಗಾಗಿ ಪಡಿತರ ಚೀಟಿ ನೊಂದಾವಣಿ ಯಂತ್ರಗಳನ್ನು ಅವರ ಮನೆಗೇ ಕೊಂಡೊಯ್ದು ಸಹಾಯ ಮಾಡಿದ್ದ ಖಾದರ್ ಅವರು ಆ ಮುಂಚೆ ಟ್ರಾಫಿಕ್ ನಲ್ಲಿ ಸಿಕ್ಕಿಕೊಂಡಿದ್ದ ಆಂಬ್ಯುಲೆನ್ಸ್ ಗೆ ದಾರಿ ಮಾಡಲು ಸ್ವತಃ ರಸ್ತೆಗಿಳಿದು ಟ್ರಾಫಿಕ್ ಮುಕ್ತಗೊಳಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.