ಮುಂಬಯಿ, ನ.13: ಕಾಂಗ್ರೆಸ್ನ ಕಾರ್ಮಿಕ ಘಟಕ ಇಂಟೆಕ್ ಈಗ ರಾಜ್ಯದಲ್ಲಿ ಪ್ರಭಲ ಕಾರ್ಮಿಕ ಸಂಘಟನೆಯಾಗಿ ಬೆಳೆಯುತ್ತಿದೆ. ಇದೇ ಕಾರಣದಿಂದ ಇಂಟೆಕ್ ಸಂಸ್ಥೆಗೂ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಾತಿನಿಧ್ಯ ಕೊಡಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಈ ಆಗ್ರಹದ ಹಿಂದೆಯೇ ರಾಕೇಶ್ ಮಲ್ಲಿ ಕುಂದಾಪುರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸುವ ನಿರೀಕ್ಷೆ ಬಲವಾಗಿದೆ.
ಈ ಬಾರಿಯ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಐದು ಸ್ಥಾಗಳನ್ನಾದರೂ ಇಂಟೆಕ್ಗೆ ಬಿಟ್ಟುಕೊಡಬೇಕು ಎಂದು ಇಂಟೆಕ್ ಮೂಲಕ ಕಾಂಗ್ರೆಸ್ ವರಿಷ್ಠರಿಗೆ ಮನವಿ ಸಲ್ಲಿಸಲಾಗಿದೆ. ಈ ಮನವಿ ಆದ್ಯತೆ ಪಡೆಯುತ್ತದೆ ಎಂದಾದರೆ ಕನಿಷ್ಠ ಒಂದು ಸ್ಥಾನವಾದರೂ ಇಂಟೆಕ್ಗೆ ಸಿಗುವ ಸಾಧ್ಯತೆ ಇದೆ. ಇಂಟೆಕ್ ರಾಜ್ಯಾಧ್ಯಕ್ಷ ನೆಲೆಯಲ್ಲಿ ರಾಕೇಶ್ ಮಲ್ಲಿ ವಿಧಾನಸಭೆಗೆ ಸ್ಪರ್ಧಿಸುವ ಸ್ಥಾನ ಪಡೆಯಲಿದ್ದಾರೆ. ಆದರೆ ರಾಕೇಶ್ ಮಲ್ಲಿಗೆ ಸ್ಪರ್ಧೆಯ ಅವಕಾಶ ಇರುವ ವಿಧಾನಸಭಾ ಕ್ಷೇತ್ರ ಹುಡುಕುವುದೇ ಕಷ್ಟವಾಗಿದೆ. ರಾಕೇಶ್ ಮಲ್ಲಿಯ ಮೊದಲ ಆದ್ಯತೆ ಪುತ್ತೂರು, ಒಂದು ವೇಳೆ ಶಕುಂತಳಾ ಶೆಟ್ಟರು ಕಾಂಗ್ರೆಸ್ನಿಂದ ಹಾರಿದರೆ ಮಾತ್ರವೇ ಅಲ್ಲಿ ಸ್ಪರ್ಧಿಸುವ ಅವಕಾಶ ಸಿಗಬಹುದು. ಆದರೆ ಹಾಲಿ ಶಾಸಕಿ ಶಕುಂತಳಾ ಶೆಟ್ಟ ಬಿಜೆಪಿ ಸೇರುತ್ತಾರೆ ಎಂಬುದು ಕೇವಲ ಗಾಳಿ ಸುದ್ದಿ ಎಂಬುದು ಸ್ಪಷ್ಟವಾಗಿದೆ. ಆದುದರಿಂದ ಬೇರೆ ಕ್ಷೇತ್ರ ಹುಡುಕುವುದು ರಾಕೇಶ್ ಮಲ್ಲಿಗೆ ಅನಿವಾರ್ಯ.
ಅಂತಹ ಸ್ಥಿತಿಯಲ್ಲಿ ಅವರ ಕಣ್ಣು ಸುರತ್ಕಲ್ನತ್ತ ಹರಿದಾಡಿದ್ದೂ ಇದೆ. ಏಕೆಂದರೆ ಇಂಟೆಕ್ನ ಹಿಂದಿನ ರಾಜ್ಯಾಧ್ಯಕ್ಷ ಎನ್.ಎಂ ಅಡ್ಯಂತಾಯರು ಇಂಟೆಕ್ ಮೀಸಲಾತಿ ಪಡೆದು ಶಾಸಕರಾಗಿದ್ದು ಸುರತ್ಕಲ್ ಕ್ಷೇತ್ರದಿಂದಲೇ. ಆದರೆ ಈಗ ಈ ಕ್ಷೇತ್ರದಲ್ಲಿ ಜಾಗ ಖಾಲಿ ಇಲ್ಲ. ಮೊಯ್ದಿನ್ ಬಾವಾ ಆವರಿಸಿ ಬಿಟ್ಟಿದ್ದಾರೆ. ರಾಕೇಶ್ ಮಲ್ಲಿ ಕರಾವಳಿಯ ಹೊರತಾದ ಪ್ರದೇಶಗಳಲ್ಲಿ ಸ್ಪರ್ಧಿಸುವ ಅವಕಾಶ ಇಲ್ಲವೆ ಇಲ್ಲ. ಅದೂ ಅವಿಭಜಿತ ದ.ಕ ಜಿಲ್ಲೆಯಲ್ಲಿಯೇ ಸ್ಪರ್ಧೆಯಾಗಬೇಕು ಎಂಬ ಲೆಕ್ಕಾಚಾರದಲ್ಲಿ ಹುಡುಕುವುದಾದರೆ ಈಗ ಖಾಲಿ ಇರುವುದು ಕುಂದಾಪುರ ವಿಧಾನಸಭಾ ಕ್ಷೇತ್ರ ಮಾತ್ರ. ಕುಂದಾಪುರದಲ್ಲಿ ಚುನಾವಣೆಗೆ ಸ್ಪರ್ಧಿಸುವ ಪ್ರಭಾವಿ ನಾಯಕರು ಕಾಣುತ್ತಿಲ್ಲ. ನಾಲ್ಕು ಬಾರಿ ಈ ಕ್ಷೇತ್ರದಲ್ಲಿ ಗೆದ್ದಿದ್ದ ಪ್ರತಾಪಚಂದ್ರ ಶೆಟ್ಟಿ ಈಗ ವಿಧಾನ ಪರಿಷತ್ಗೆ ಸೀಮಿತರಾಗಿ ಬಿಟ್ಟಿದ್ದಾರೆ.
ಕಳೆದ ಬಾರಿ ಕಾಂಗ್ರೆಸ್ ಅಭ್ಯಥಿರ್üಯಾಗಿದ್ದ ಜಯಪ್ರಕಾಶ್ ಹೆಗ್ಡೆ ಈಗ ಬಿಜೆಪಿ ಪಾಲಾಗಿದ್ದಾರೆ.ಹಾಲಾಡಿ ಶ್ರೀನಿವಾಸ ಶೆಟ್ಟರನ್ನು ಕಳೆದ ನಾಲ್ಕು ಅವಧಿಯಲ್ಲಿ ಎದುರಿಸಲು ಕಾಂಗ್ರೆಸ್ಗೆ ಸಾಧ್ಯವಾಗಿಲ್ಲ. ಹಾಲಾಡಿ ಶ್ರೀನಿವಾಸ ಶೆಟ್ಟರ ಪಾರಮ್ಯವನ್ನು ಕುಂದಾಪುರದಲ್ಲಿ ಮುರಿಯಲು ಪ್ರಭಲ ಶಕ್ತಿಯೊಂದರ ಅವಶ್ಯಕತೆಯನ್ನು ಕಾಂಗ್ರೆಸ್ ಹುಡುಕುತ್ತಲೂ ಇದೆ. ರಾಕೇಶ್ಮಲ್ಲಿ ತನ್ನ ಸಾಮಥ್ರ್ಯ ತೋರಿಸಲು ಎಷ್ಟರ ಮಟ್ಟಿಗೆ ಸಫಲರಾಗುತ್ತಾರೆ ಎಂಬುದು ಕಾದು ನೋಡಬೇಕಿದೆ. ರಾಕೇಶ್ ಮಲ್ಲಿ ಈಗ ಕುಂದಾಪುರದತ್ತ ಕಣ್ಣು ನೆಟ್ಟಿರುವುದಂತೂ ಸ್ಪಷ್ಟ.
ರಾಕೇಶ್ ಮಲ್ಲಿಗೆ ರಾಜಕೀಯ ಬೆಳವಣಿಗೆಯಲ್ಲಿ ಹಲವು ತೊಡಕುಗಳಿದ್ದವು. ದ.ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರೊಂದಿಗಿನ ಮುನಿಸು ಕೂಡ ಇದರಲ್ಲಿ ಒಂದಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ರೈಯೊಂದಿಗೆ ಮಲ್ಲಿ ಬಾಂಧವ್ಯ ಗಟ್ಟಿಗೊಳಿಸಿ ಕೊಂಡಿದ್ದಾರೆ. ಇದರೊಂದಿಗೆ ಪ್ರದಾನ ಅಡ್ಡಿಯನ್ನು ನಿವಾರಿಸಿ ಕೊಂಡಿದ್ದಾರೆ ಎನ್ನಬಹುದು. ಸದ್ಯ ರಾಕೇಶ್ ಮಲ್ಲಿ ಕುಂದಾಪುರ ಕ್ಷೇತ್ರದಾದ್ಯಂತ ಓಡಾಡುತ್ತಿರುವುದು ಸ್ಪರ್ಧಿಸುವ ನಿರೀಕ್ಷೆ ಬಲವಾಗಿದೆ.