(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ಡಿ.09: ಇದೇ ಡಿಸೆಂಬರ್ 23-24 ರಂದು ಮಂಗಳೂರು ಪಿಲಿಕುಳದಲ್ಲಿ ನಡೆಯಲಿರುವ ತುಳುನಾಡೋಚ್ಚಯ-2017 ಸಂಭ್ರÀ್ರಮವನ್ನು ಯಶಸ್ವಿಗೊಳಿಸುವುದರ ಜೊತೆಗೆ ವಾಮಂಜೂರುನಿಂದ ಹೊರಡುವ ಜನಮೈತ್ರಿ ದಿಬ್ಬಣದ ಯಶಸ್ವಿಗಾಗಿ ಶ್ರಮಿಸುವುದರೊಂದಿಗೆ ವಾಮಂಜೂರಿನ ಎಲ್ಲಾ ನಾಗರಿಕರನ್ನೂ ಪಾಲ್ಗೊಳ್ಳುವಂತೆ ಮಾಡುತ್ತೇವೆ ಎಂದು ರಾಜೀವ್ ಅಂಚನ್ ಅಪ್ಪಣಬೆಟ್ಟು ಹೇಳಿದರು. ವಾಮಂಜೂರು ಪ್ರಾದೇಶಿಕ ಸಮಿತಿಯ ಅಧ್ಯಕ್ಷತೆಯ ಜವಾಬ್ದಾರಿ ವಹಿಸಿ ಅಂಚನ್ ಮಾತನಾಡಿದರು.
ತುಳುನಾಡೋಚ್ಚಯ ಸಮಿತಿ ಅಧ್ಯಕ್ಷ ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಜನ್ಮ ಭೂಮಿಯು ಸ್ವರ್ಗಕ್ಕಿಂತಲೂ ಮಿಗಿಲು ಎಂಬ ಶ್ರೀರಾಮಚಂದ್ರನ ನುಡಿಯಂತೆ ಕಳೆದ 51 ವರ್ಷಗಳಿಂದ ನಾನು ವಿದೇಶದಲ್ಲಿದ್ದರೂ ನನ್ನ ಜನ್ಮಭೂಮಿಯಾದ ಈ ತುಳುನಾಡಿನ ಮೇಲಿನ ಪ್ರೀತಿಯು ಕಿಂಚಿತ್ತೂ ಕಡಿಮೆಯಾಗಿಲ್ಲ. ಆ ಪ್ರೀತಿಯಿಂದಲೇ ತುಳುನಾಡೋಚ್ಚಯದ ಅಧ್ಯಕ್ಷತೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇನೆ. ಇದರ ಯಶಸ್ವಿಗೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ತುಳುನಾಡಿನಲ್ಲಿ ಜಾತಿ,ಮತ,ಭಾಷಾ ಸೌಹಾರ್ಧತೆ ಎಂಬ ನೆಲೆಗಟ್ಟಿನಲ್ಲಿ ನಡೆಯುತ್ತಿರುವ ಈ ಸಂಭ್ರಮ ವಾಮಂಜೂರು ಪರಿಸರದಲ್ಲಿ ನಡೆಯುತ್ತಿರುವುದು ನಮ್ಮ ಸೌಭಾಗ್ಯ. ಈ ಉತ್ಸವ ಯಶಸ್ವಿಗೊಳಿಸುವ ಹೊಣೆ ನಮ್ಮ ಮೇಲಿದೆ ಎಂದು ವಾಮಂಜೂರು ಪ್ರಾದೇಶಿಕ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಶೆಟ್ಟಿ ಮೂಡುಗುತ್ತು ಅಭಿಪ್ರಾಯಪಟ್ಟರು.
ತುಳುನಾಡೋಚ್ಚಯ ಪ್ರಧಾನ ಕಾರ್ಯದರ್ಶಿ ಶಮೀನ ಆಳ್ವ ಮೂಲ್ಕಿ, ವಿಶ್ವ ತುಳುವೆರೆ ಆಯನೊ ಕೂಟ ಪ್ರಧಾನ ಕಾರ್ಯದರ್ಶಿ ಡಾ| ರಾಜೇಶ್ ಆಳ್ವ, ತುಳು ರಕ್ಷಣಾ ವೇದಿಕೆಯ ಸಿರಾಜ್ ಅಡ್ಕರೆ ಮತ್ತಿತರÀರು ಉಪಸ್ಥಿತರಿದ್ದರು. ಶರತ್ ಶೆಟ್ಟಿ ಪಡುಪಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಭಾಸ್ಕರ ಕುಂಬ್ಳೆ ವಂದಿಸಿದರು.