ಮಂಗಳೂರು: ಸೂಕ್ತ ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 1 ಕೋಟಿ ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.ಕಂಕನಾಡಿ ನಗರ ಠಾಣೆ ಪೊಲೀಸರು ಗಸ್ತಿನಲ್ಲಿರುವ ಸಂದರ್ಭದಲ್ಲಿ ಈ ಅಕ್ರಮ ಹಣ ಸಾಗಾಣಿಕೆ ಪತ್ತೆ ಹಚ್ಚಿದ್ದಾರೆ.ಪೊಲೀಸರು ಗಸ್ತಿನಲ್ಲಿರುವ ಸಂದರ್ಭದಲ್ಲಿ ಅಕ್ರಮ ಹಣ ಸಾಗಾಣಿಕೆ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು.
ಈ ಹಿನ್ನೆಲೆಯಲ್ಲಿ ಪಂಪ್ ವೆಲ್ ವೃತ್ತದ ಬಳಿ ಹುಂಡೈ ಐ20 ಕಾರನ್ನು ಅಡ್ಡಗಟ್ಟಿ, ತಪಾಸಣೆ ನಡೆಸಿದಾಗ ಈ ಅಕ್ರಮ ಹಣ ಸಾಗಾಣಿಕೆ ಪತ್ತೆಯಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಹಾರಾಷ್ಟ್ರದ ಸಾಂಗ್ಲಿ ನಿವಾಸಿಗಳಾದ ತಾನಾಜಿ (54), ಅಮೂಲ್ ಮಾಲಿ(29), ಬೆಳಗಾವಿ ಜಿಲ್ಲೆಯ ಅಥಣಿ ನಿವಾಸಿ ದಿನೇಶ್ ಪ್ರಕಾಶ್ ಶಿಂಧೆ ಎಂದು ಗುರುತಿಸಲಾಗಿದೆ. ಬಂಧಿತರಿಂದ ಒಂದು ಕೋಟಿ ರೂಪಾಯಿ ನಗದು, ಒಂದು ಕಾರು, ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.