ದಿನಾಂಕ 17.01.2017ರಂದು ಉಡುಪಿ ಶ್ರೀಕೃಷ್ಣಮಠದ ಪರ್ಯಾಯ ಸರ್ವಜ್ಞ ಪೀಠವನ್ನೇರುವ ಶ್ರೀಮನ್ ಮಧ್ವಾಚಾರ್ಯ ಮೂಲಸಂಸ್ಥಾನ ಶ್ರೀ ಹೃಷಿಕೇಶತೀರ್ಥ ಪೀಠ ಶ್ರೀ ಪಲಿಮಾರು ಮಠದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು ದಿ.30.12.2017ರಂದು ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಪಲಿಮಾರು ಶ್ರೀಗಳವರನ್ನು ಸ್ವಾಗತಿಸಿ, ಪಾದಪೂಜೆ ನೆರವೇರಿಸಿ, ಅವರಿಗೆ ಕೊಂಡೆವೂರಿನ ಆಶ್ರಮದಲ್ಲಿ ಸಾವಯವ ಕೃಷಿಯಲ್ಲಿ ಬೆಳೆದು ಕುಟ್ಟಿದ ಅಕ್ಕಿಯನ್ನು ಆಶ್ರಮದ ಸಮಸ್ತ ಭಕ್ತರ ಪರವಾಗಿ ಸಮರ್ಪಿಸಿದರು.
ಸುತ್ತುಮುತ್ತಲಿನ ಪ್ರದೇಶದ 20ಕ್ಕೂ ಹೆಚ್ಚು ದೇವಸ್ಥಾನಗಳು, ದೈವಸ್ಥಾನಗಳು, ಭಜನಾಮಂದಿರಗಳು, ಹಾಗೂ ಸೇವಾಸಂಸ್ಥೆಗಳು, ಶ್ರೀಗಳವರಿಗೆ ಫಲಕಾಣಿಕೆ ಸಮರ್ಪಿಸಿ ಆಶೀರ್ವಾದ ಪಡಕೊಂಡರು. ನಂತರ ಪಲಿಮಾರು ಶ್ರೀಗಳವರು ಸೇರಿದ ಭಕ್ತಜನರನ್ನು ಆಶೀರ್ವದಿಸುತ್ತಾ “ದೊಡ್ಡ ಸಾಧನೆ ಮಾಡಿದ ಈ ಕ್ಷೇತ್ರಕ್ಕೆ ಬರಲು ನಮಗೆ ತುಂಬಾ ಸಂತಸವಾಗುತ್ತಿದೆ. ಇಲ್ಲಿಯ ವಿದ್ಯಾಸೇವೆ, ಭಜನಾಸೇವೆಗಳನ್ನು ಹೊಗಳಿ, ತಮ್ಮ ಪರ್ಯಾಯ ಅವಧಿಯಲ್ಲಿ ನಿತ್ಯ ನಡೆಯುವ ಲಕ್ಷ ತುಳಸೀ ಅರ್ಚನೆಯ ಮಹತ್ತ್ವವನ್ನು ಮತ್ತು ಸುವರ್ಣಗೋಪುರ ಯೋಜನೆಗಳನ್ನು ವಿವರಿಸಿದರು.” ಶ್ರೀಕ್ಷೇತ್ರ ಕಟೀಲಿನ ಬ್ರಹ್ಮಶ್ರೀ ಅನಂತಪದ್ಮನಾಭ ಆಸ್ರಣ್ಣರವರು ‘ಭಜನೆ ಇದ್ದಲ್ಲಿ ವಿಭಜನೆ ಸಾಧ್ಯವಿಲ್ಲ, ಮುಕ್ತಿ ಅಪೇಕ್ಷಿಸುವವರು ನನ್ನ ಜೊತೆ ಬನ್ನಿ ಎಂದ ಶ್ರೀರಾಮದೇವರ ಆರಾಧನೆ ಮಾಡುವ ಪಲಿಮಾರು ಶ್ರೀಗಳವರ ಯೋಜನೆಗಳಿಗೆ ನಾವೆಲ್ಲ ಕೊಂಡೆವೂರು ಶ್ರೀಗಳ ಮೂಲಕ ಕೈಜೋಡಿಸಿ ಆತ್ಮೋದ್ಧಾರಗೊಳಿಸೋಣ’ ಎಂದರು. ಕೊಂಡೆವೂರು ಶ್ರೀಗಳು ಪಲಿಮಾರು ಶ್ರೀಗಳ ಲಕ್ಷ ತುಳಸೀ ಅರ್ಚನೆಗೆ ಇಲ್ಲಿಯ ಭಕ್ತರ ಮೂಲಕ ಪ್ರತಿದಿನವೂ ತುಳಸಿ ತಲಪಿಸುವ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ವಿವಿಧ ದೇವಸ್ಥಾನಗಳ, ಸಂಘಸಂಸ್ಥೆಗಳ, ಸಮಾಜಗಳ ಅನೇಕ ಪ್ರಮುಖರು ಭಕ್ತಾದಿಗಳು ಪಾಲ್ಗೊಂಡು ಆಶೀರ್ಮಂತ್ರಾಕ್ಷತೆ ಪಡೆದು ಧನ್ಯರಾದರು.