ಮಂಗಳೂರು: ದ.ಕ.ಜಿಲ್ಲೆಯ ಬಿ.ಸಿ.ರೋಡ್ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಚಿವ ಬಿ. ರಮಾನಾಥ ರೈ ಅವರು ಸುರಿಸಿದ್ದು ಮೊಸಳೆ ಕಣ್ಣೀರು. ಮುಂದಿನ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಈ ಕಣ್ಣೀರು ಬಂದಿದೆ ಎಂದು ಬಿಜೆಪಿ ಮುಂದಾಳು ಹರಿಕೃಷ್ಣ ಬಂಟ್ವಾಳ ಆರೋಪಿಸಿದ್ದಾರೆ.ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜನಾರ್ದನ ಪೂಜಾರಿ ಅವರಿಗೆ ಬೈದಿರುವ ವಿಚಾರದಲ್ಲಿ ನಾನು ರೈ ಅವರನ್ನು ಧರ್ಮಸ್ಥಳಕ್ಕೆ ಪ್ರಮಾಣಕ್ಕೆ ಬರಲು ಆಹ್ವಾನಿಸಿದ್ದೆ.
ಬೈದಿರುವುದಕ್ಕೆ ಸಾಕ್ಷಿಯಾಗಿರುವ ಅರುಣ್ ಕುವೆಲ್ಲೋ ಅವರು ಕೂಡ ಧರ್ಮಸ್ಥಳಕ್ಕೆ ಬರಲು ಒಪ್ಪಿದ್ದಾರೆ ಎಂದು ಸಚಿವ ರಮಾನಾಥ ರೈಗೆ ಸವಾಲು ಹಾಕಿದರು.ಬೈಯುವ ಸಂದರ್ಭದಲ್ಲಿ ಪೂಜಾರಿ ಅವರ ಮನೆಯವರು ಇರಲಿಲ್ಲ. ಹೀಗಿರುವಾಗ ತಾವು ಬೈದಿರುವ ವಿಚಾರವನ್ನು ಪೂಜಾರಿ ಅವರ ಮನೆಯವರು ಹೇಳಬೇಕು ಎನ್ನುವ ಮೂಲಕ ರಮಾನಾಥ ರೈ ಅವರು ಈ ವಿಚಾರದಿಂದ ಪಲಾಯನ ಮಾಡಲು ನೋಡುತ್ತಿದ್ದಾರೆ. ನಾನು ಈ ಹಿಂದೆ ಹೇಳಿರುವ ಮಾತಿಗೆ ಈಗಲೂ ಬದ್ಧನಿದ್ದು, ಧರ್ಮಸ್ಥಳದಲ್ಲಿ ಪ್ರಮಾಣ ಮಾಡುವುದಕ್ಕೂ ಸಿದ್ಧನಿದ್ದೇನೆ. ಸಚಿವ ರೈ ಕೂಡ ಧರ್ಮಸ್ಥಳಕ್ಕೆ ಬರಲಿ ಎಂದು ಹರಿಕೃಷ್ಣ ಹೇಳಿದ್ದಾರೆ.