ಮಂಗಳೂರು : ನಗರದಲ್ಲಿ ಕೇವಲ ಏಳು ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದ ವಿನಿಶಾ ಚಾರಿಟೇಬಲ್ ಟ್ರಸ್ಟ್ ಸುಮಾರು ನೂರಾ ಅರವತ್ತು ಮಂದಿ ಅಶಕ್ತ ರೋಗಿಗಳಿಗೆ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ವಿಕಲಚೇತನರಿಗೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನೆರವು ನೀಡುವುದರೊಂದಿಗೆ ಸಾಧಕರನ್ನೂ ಗುರುತಿಸಿ ಸನ್ಮಾನಿಸುವುದರ ಮೂಲಕ ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷದ ಮೊದಲ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿತು.
ಕಾರ್ಯಕ್ರಮದ ಆರಂಭದಲ್ಲಿ ಯೋಗಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಇದುವರೆಗೆ ಬೇರೆ ಬೇರೆ ಕಡೆ ಸುಮಾರು ಇನ್ನೂರ ಮೂವತ್ತು ಯೋಗಶಿಬಿರಗಳನ್ನು ಏರ್ಪಡಿಸಿದ ಯೋಗಶಿಕ್ಷಕ ಜಗದೀಶ ಶೆಟ್ಟಿ ಅವರು ಯೋಗ ಶಿಬಿರ ನಡೆಸಿ ಕೊಟ್ಟರು.
ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕವಿ ಹಾಗೂ ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರು, ವಿನಿಶಾ ಟ್ರಸ್ಟ್ ವತಿಯಿಂದ ಯೋಗ ಶಿಬಿರಗಳನ್ನು ಏರ್ಪಡಿಸಿ ದೇಹ, ಬುದ್ಧಿ, ಮನಸ್ಸುಗಳ ಆರೋಗ್ಯ ಕಾಪಾಡುವ ಕೆಲಸ ಮಾಡಲಾಗುತ್ತಿದೆ ಹಾಗೂ ಸಮಾಜದಲ್ಲಿ ಅಗತ್ಯವಿರುವವರಿಗೆ ಆರ್ಥಿಕ ಹಾಗೂ ವಸ್ತು ರೂಪದ ನೆರವಿನ ಹಸ್ತ ಚಾಚುವುದರ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಕೆಲಸವೂ ಆಗುತ್ತಿದೆ. ಕಲ್ಯಾಣರಾಜ್ಯ ನಿರ್ಮಾಣವಾಗುವಲ್ಲಿ ಇದು ದೊಡ್ಡ ಕೊಡುಗೆ ಎಂದು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ರೆ. ಫಾ. ಆಂಡ್ರೂ ಡಿ’ಸೋಜಾ ವಹಿಸಿದ್ದರು. ಮಂದಾರಬೈಲಿನ ಧರ್ಮದರ್ಶಿ ಪ್ರಕಾಶ್ ಪಂಡಿತ್ ಹಾಗೂ ಕಟೀಲು ದೇವಳದ ಅರ್ಚಕ ಕಮಲಾದೇವಿ ಪ್ರಸಾದ್ ಆಸ್ರಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ಮರಿಯಾ ಪ್ರಿಯಾ ಮ್ಯಾಲೆಟ್ ಮತ್ತು ಇತರ ಪದಾಧಿಕಾರಿಗಳು ಹಾಜರಿದ್ದರು.