ಮಂಗಳೂರು: ಮಂಗಳೂರಿನ ಕೊಟ್ಟಾರ ಚೌಕಿಯ ಬಳಿ ದುಷ್ಕರ್ಮಿಗಳ ದಾಳಿಗೆ ಒಳಗಾಗಿ ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಬ್ದುಲ್ ಬಷೀರ್ ಚಿಕಿತ್ಸೆ ಫಲಕಾರಿಯಾಗದೇ ಆದಿತ್ಯವಾರ ಕೊನೆಯುಸಿರೆಳೆದಿದ್ದಾರೆ.ಮಂಗಳೂರು ಹೊರ ವಲಯದ ಕಾಟಿಪಳ್ಳದಲ್ಲಿ ದೀಪಕ್ ರಾವ್ ಕೊಲೆ ನಡೆದ ಡಿಸೆಂಬರ್ 3ರ ರಾತ್ರಿ ವೇಳೆ ಕೊಟ್ಟಾರ ಚೌಕಿಯಲ್ಲಿರುವ ಫಾಸ್ಟ್ ಫುಡ್ ಅಂಗಡಿಯ ಕೆಲಸ ಮುಗಿಸಿ ಅಬ್ದುಲ್ ಬಷೀರ್ ಮನೆಗೆ ತೆರಳುತ್ತಿದ್ದರು.
ಈ ವೇಳೆ ಅವರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು.ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಸತತ 17 ಬಾರಿ ಬಶೀರ್ ಅವರ ಮೇಲೆ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ರಸ್ತೆಬದಿಯಲ್ಲಿ ಬಿದ್ದಿದ್ದ ಬಷೀರ್ ಅವರನ್ನು ಶೇಖರ್ ಮತ್ತು ರಾಹುಲ್ ಎಂಬ ಯುವಕರು ಆಸ್ಪತ್ರೆಗೆ ಸೇರಿಸಿದ್ದರು.ಕಳೆದ 4 ದಿನಗಳಿಂದ ಎ.ಜೆ. ಆಸ್ಪತ್ರೆಯಲ್ಲಿ ಬಷೀರ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಬಷೀರ್ ಚಿಕಿತ್ಸೆಗೆ ಸ್ಪಂದಿಸದೇ ಆದಿತ್ಯವಾರ ಬೆಳಿಗ್ಗೆ 8.10ಕ್ಕೆ ಕೊನೆಯುಸಿರೆಳೆದಿದ್ದಾರೆ.