ಮಂಗಳೂರು : ಕರಾವಳಿ ಭಾಗದಲ್ಲಿ ಕಳೆದ ಕೆಲವು ಸಮಯದಿಂದ ಅವಿರತವಾಗಿ ಅಶಾಂತಿಯ ವಾತಾವರಣ ಕಂಡು ಬರುತ್ತಿದೆ.ಕರಾವಳಿ ಭಾಗದ ಜನರು ಶಾಂತಿಪ್ರಿಯರಾಗಿದ್ದು ಪರಸ್ಪರ ನಂಬಿಕೆ, ಪ್ರೀತಿ-ವಿಶ್ವಾಸ ಮತ್ತು ಸ್ನೇಹದಿಂದ ಸಹಜ ಜೀವನ ನಡೆಸುತ್ತಿದ್ದ ಜನರಲ್ಲಿ ಸಂಶಯ, ಅಪನಂಬಿಕೆ ಮತ್ತು ಸೇಡಿನ ಭಾವನೆಗಳು ಕಾಣುತ್ತಿವೆ.
ಈ ಸಾವು-ನೋವಿನ ಸಂದರ್ಭದಲ್ಲಿ ನಿರ್ಧಿಷ್ಟವಾದ ಉದ್ದೇಶಗಳು ತಿಳಿಯುತ್ತಿಲ್ಲವಾದರೂ ಪರಸ್ಪರ ಅಪನಂಬಿಕೆ ಮತ್ತು ಅಶಾಂತಿಗೆ ಕಾರಣವಾಗುತ್ತಿವೆ. ವಿಚಾರ ಭೇದಗಳಿದ್ದಲ್ಲಿ ಪರಸ್ಪರ ಮಾತುಕತೆ ಹಾಗೂ ವಿಚಾರ ವಿನಿಮಯದೊಂದಿಗೆ ಪರಿಹರಿಸಿಕೊಳ್ಳಬಹುದಾದುದನ್ನು ಹಿಂಸಾ ಹಂತಕ್ಕೆ ಕೊಂಡೊಯ್ಯುವುದು ಯಾವ ಧರ್ಮಕ್ಕೂ ಶ್ರೇಯಸ್ಕರವಲ್ಲ.ಧರ್ಮವನ್ನು ಗೌರವಿಸೋಣ.
ಪ್ರತೀಕಾರ ಮತ್ತು ಸೇಡನ್ನು ಬದಿಗಿರಿಸೋಣ. ಎಲ್ಲರೂ, ವಿಶೇಷವಾಗಿ ಅಂದರೆ ತಂದೆ-ತಾಯಿ, ಸಹೋದರರು-ಸಹೋದರಿಯರು ತಮ್ಮ ಮನೆಗಳಲ್ಲಿ ತಾಳ್ಮೆ ಮತ್ತು ಶಾಂತಿಯನ್ನು ಕಾಪಾಡುವ ಬಗ್ಗೆ ಮಾತುಕತೆ ನಡೆಸಿ. ಸಹನೆ, ಸೌಹಾರ್ದ ಮತ್ತು ಸಂಯಮವನ್ನು ಬೆಳೆಸಿಕೊಂಡು ಎಲ್ಲರೂ ಶಾಂತಿ - ಸಾಮರಸ್ಯದಿಂದ ಬಾಳೋಣ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮನವಿ ಮಾಡಿಕೊಂಡಿದ್ದಾರೆ.