ಮಂಗಳೂರು: ಮೂಡಬಿದಿರೆಯ ಆಳ್ವಾಸ್ ಶಾಲಾ ವಿದ್ಯಾರ್ಥಿನಿ ಕಾವ್ಯಾ ಪೂಜಾರಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗವು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ನೊಟೀಸ್ ನೀಡಿದೆ.ಕಾವ್ಯಾ ಪೂಜಾರಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಮತ್ತು ದಾಖಲೆಗಳ ಸಮೇತ ಇನ್ನು ನಾಲ್ಕು ವಾರಗಳ ಒಳಗೆ ಮಾನವ ಹಕ್ಕು ಆಯೋಗದ ಮುಂದೆ ಹಾಜರಾಗುವಂತೆ ನೊಟೀಸ್ನಲ್ಲಿ ಸೂಚಿಸಲಾಗಿದೆ.
ಆಳ್ವಾಸ್ನಲ್ಲಿ ಓದುತ್ತಿದ್ದ ಕಾವ್ಯಾ ಕಳೆದ ವರ್ಷ ಜುಲೈ 20ರಂದು ತನ್ನ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಈ ಸಾವು ರಾಜ್ಯಾದ್ಯಂತ ಕೋಲಾಹಲ ಸೃಷ್ಠಿಸಿತ್ತು, ದೈಹಿಕ ಶಿಕ್ಷಕನೋರ್ವನ ಕಿರುಕುಳದಿಂದ ಕಾವ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಊಹಾಪೋಹ ಹರಡಿತ್ತು.ಕಾವ್ಯಾ ಪೂಜಾರಿ ಸಾವಿನ ತನಿಖೆ ಹಾಗೂ ಆಳ್ವಾಸ್ ಶಾಲೆಯಲ್ಲಿ ಮಾನವ ಹಕ್ಕು ಉಲ್ಲಂಘನೆ ಆಗುತ್ತಿದೆ ಎಂದು ಮಾನವ ಹಕ್ಕು ಹೋರಾಟಗಾರ ಸಾದಿಕ್ ಪಾಷಾ ಎಂಬುವರು ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು.