ಮಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿಪಕ್ಷದವರು ರಾಜ್ಯ ಸರಕಾರದ ಎಲ್ಲಾ ಜನಪ್ರೀಯ ಯೋಜನೆಗಳು ನಮ್ಮದು ಎನ್ನುತ್ತಿದ್ದಾರೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ವ್ಯಂಗ್ಯವಾಡಿದ್ದಾರೆ.ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಬರುವಾಗ ವಿಪಕ್ಷದವರು ರಾಜ್ಯ ಸರಕಾರದ ಎಲ್ಲಾ ಜನಪ್ರಿಯ ಯೋಜನೆಗಳು ನಮ್ಮದು ಎನ್ನುತ್ತಿದ್ದಾರೆ.
ಅದ್ಯಾಕೆ ಗುಜರಾತ್ ಸೇರಿ ಬಿಜೆಪಿ ಆಡಳಿತದ ರಾಜ್ಯದಲ್ಲಿ ಅನ್ನಭಾಗ್ಯ ಈವರೆಗೆ ಜಾರಿಗೆ ತಂದಿಲ್ಲ. ಬಿಜೆಪಿಯವರು ತಾವು ಅಧಿಕಾರದಲ್ಲಿದ್ದಾಗ ಏನೂ ಕೆಲಸ ಮಾಡದೇ ಈಗ ಎಲ್ಲವೂ ನಮ್ಮದು ಎನ್ನುವುದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದರು.ಮಂಗಳೂರು ಹೊರವಲಯದ ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಪ್ರಕರಣದಲ್ಲಿ ಬಂಧಿತ ಆರೋಪಿಗಳು ಸುಪಾರಿ ಕಿಲ್ಲರ್ಸ್, ಹಾಗಾದರೆ ದೀಪಕ್ ರಾವ್ ಹತ್ಯೆಗೆ ಸುಪಾರಿ ಕೊಟ್ಟವರಾರು?. ಈ ಬಗ್ಗೆ ಸಮಗ್ರ ತನಿಖೆಯಾಗಬೇಕಿದೆ ಸಾವಿನ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯ ಇಲ್ಲ.ದೀಪಕ್ ರಾವ್ ಪ್ರಕರಣದ ಆರೋಪಿಗಳ ಸಂಬಂಧಿಕರು ಯಾರ ಜೊತೆ ಬಿಸಿನೆಸ್ ಮಾಡುತ್ತಿದ್ದಾರೆ. ಅವರಿಗೆ ಸುಪಾರಿ ಕೊಟ್ಟವರಾರು? ಈ ಹತ್ಯೆ ಹಿಂದಿರುವ ಕೈವಾಡ ಯಾರದ್ದು ಈ ಎಲ್ಲಾ ವಿಚಾರಗಳ ಬಗ್ಗೆ ತನಿಖೆಯಾಗಬೇಕಿದೆ ಎಂದರು.