ಮಂಗಳೂರು: ಬರ್ತ್ ಡೇ ಪಾರ್ಟಿ ಮುಗಿಸಿ ಕಾರಿನಲ್ಲಿ ಸ್ನೇಹಿತನೊಂದಿಗೆ ಮನೆಗೆ ತೆರಳುತ್ತಿದ್ದ ಯುವತಿಯೋರ್ವಳ ಮೇಲೆ 3 ಮಂದಿ ಯುವಕರ ತಂಡ ಲೈಂಗಿಕ ಕಿರುಕುಳ ನೀಡಿದ ಘಟನೆ ಮಂಗಳೂರು ಹೊರವಲಯದ ಬಜ್ಪೆಯಲ್ಲಿ ನಡೆದಿದೆ. ಲೈಂಗಿಕ ಕಿರುಕುಳ ನೀಡಿದ ತಂಡ ಆಕೆಯ ಬಳಿ ಇದ್ದ ಹಣ, ಚಿನ್ನದ ಸರವನ್ನು ದೋಚಿದೆ ಎನ್ನಲಾಗಿದೆ.ಶುಕ್ರವಾರ ತಡರಾತ್ರಿ ಮಂಗಳೂರಿನ ಹೊರವಲಯದ ಬಜ್ಪೆ ಬಳಿಯ ನಿರ್ಜನ ಪ್ರದೇಶ ಆದ್ಯಪಾಡಿಯಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ವಿಮಾನ ನಿಲ್ದಾಣದ ಮಹಿಳಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿರುವ ಯುವತಿ ಶುಕ್ರವಾರ ತನ್ನ ಹುಟ್ಟು ಹಬ್ಬದ ಪಾರ್ಟಿ ಮುಗಿಸಿ ತೆರಳುವಾಗ ತಡವಾಗಿತ್ತು.
ಈ ಹಿನ್ನೆಲೆಯಲ್ಲಿ ತನ್ನ ಸಹೋದ್ಯೋಗಿಯೊಂದಿಗೆ ಕಾರಿನಲ್ಲಿ ಮನೆಯತ್ತ ತೆರಳುತ್ತಿದ್ದರು.ಕಾರಿನಲ್ಲಿಬ್ಬರು ತೆರಳಿರುವುದನ್ನು ಗಮನಿಸಿದ ಯುವಕರ ತಂಡ ಒಂದು ಹಿಂಬಾಲಿಸಿ ಕೊಂಡು ಹೋಗಿದೆ ಎಂದು ಹೇಳಲಾಗಿದೆ. ಆದ್ಯಪಾಡಿ ಬಳಿ ಕಾರು ಅಡ್ಡಗಟ್ಟಿದ ಯುವಕರ ತಂಡ ಹಿಂದೂ ಸಂಘಟನೆಯ ಹೆಸರು ಹೇಳಿಕೊಂಡು ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದೆ ಎಂದು ದೂರಲಾಗಿದೆ.ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಯುವತಿ ಪ್ರಕರಣ ದಾಖಲಿಸಿದ್ದಾಳೆ. ಯುವಕರ ತಂಡ ತನಗೆ ಲೈಂಗಿಕ ಕಿರುಕುಳವನ್ನೂ ನೀಡಿದೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.