ಮುಂಬಯಿ (ಬಂಟ್ವಾಳ), ಫೆ.12: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಗಿ ನ್ಯಾಯವಾದಿ ಎಂ.ಚಂದ್ರಶೇಖರ ಪೂಜಾರಿ ಇವರನ್ನು ಅರಣ್ಯ ಪರಿಸರ ಹಾಗೂ ಜೀವಿಶಾಸ್ತ್ರ ಮತ್ತು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ನಿರ್ದೇಶನದಂತೆ ದ.ಕ.ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಕೆ. ಹರೀಶ್ಕುಮಾರ್ ಬೆಳ್ತಂಗಡಿ ಅವರು ನೇಮಕ ಮಾಡಿರುತ್ತಾರೆ.
ನ್ಯಾಯವಾದಿ ಚಂದ್ರಶೇಖರ್ ಇವರು ಬಂಟ್ವಾಳ ತಾಲೂಕು ಟೂರಿಸ್ಟ್ ಕಾರು ಚಾಲಕ-ಮಾಲಕರÀ ಸಂಘದ ಅಧ್ಯಕ್ಷರಾಗಿ, ರೋಟರಿ ಕ್ಲಬ್ ಸದಸ್ಯರಾಗಿ, ಪ್ರತಿಷ್ಟಿತ ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷರಾಗಿ , 1994-97ರ ತನಕ ಬಂಟ್ವಾಳ ತಾಲೂಕು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿರುತ್ತಾರೆ ಮತ್ತು ಕರ್ನಾಟಕ ಸರಕಾರದ ಉಚಿತ ಕಾನೂನು ಸೇವಾ ಸಮಿತಿಯ ದ.ಕ.ಜಿಲ್ಲಾ ಸದಸ್ಯರಾಗಿ 9 ವರ್ಷಗಳ ಕಾಲ ಸೇವೆ ಮಾಡಿರುತ್ತಾರೆ. ಬಂಟ್ವಾಳದ ಸರಕಾರಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾಗಿರುವ ಇವರು `ಮುಗ್ಗಗುತ್ತು ಟ್ರಸ್ಟ್' ಬೆಳ್ತಂಗಡಿ ಇದರ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಮುಗ್ಗಗುತ್ತು ಮನೆನತದ ಪಂಜಾಜೆ ಕೊರಗಪ್ಪ ಪೂಜಾರಿ ಮತ್ತು ಮುತ್ತಮ್ಮ ಪೂಜಾರಿ ದಂಪತಿ ಸುಪುತ್ರರಾಗಿರುವರು. ಪತ್ನಿ ಎರ್ಮಾಳ್ ಕಲ್ಪನಾ ಚಂದ್ರಶೇಖರ್ ಬೆಂಗಳೂರುನಲ್ಲಿ ಹಿರಿಯ ಸಿವಿಲ್ ನ್ಯಾಯಧೀಶೆಯಾಗಿ ಸೇವಾ ನಿರತರಾಗಿದ್ದಾರೆ. ಸ್ಪೂರ್ತಿ ಚಂದ್ರಶೇಖರ್ ಮತ್ತು ಸ್ವೀಕೃತಿ ಚಂದ್ರಶೇಖರ್ ನಾಮಾಂಕಿತ ಇಬ್ಬರು ಸುಪುತ್ರಿಯರ ಚೊಕ್ಕ ಸಂಸಾರ ಇವರದ್ದಾಗಿದೆ.