ಪಾದಯಾತ್ರಿಗಳು ತಂಗುವಲ್ಲಿ ಸತ್ಸಂಗ ಕಾರ್ಯಕ್ರಮ
ಮುಂಬಯಿ (ಉಜಿರೆ), ಫೆ.13: ಮುಂದಿನ ವರ್ಷದಿಂದ ಧರ್ಮಸ್ಥಳಕ್ಕೆ ಶಿವರಾತ್ರಿ ಸಂದರ್ಭ ಬರುವ ಪಾದಯಾತ್ರಿಗಳು ತಂಗುವ ಸ್ಥಳಗಳಲ್ಲಿ ಧರ್ಮಸ್ಥಳದ ಅಖಿಲ ಕರ್ನಾಟಕ ಭಜನಾ ಪರಿಷತ್ ವತಿಯಿಂದ ಭಜನೆ, ನೃತ್ಯ ಭಜನೆ, ಧಾರ್ಮಿಕ ಉಪನ್ಯಾಸ, ಭಕ್ತಿಗೀತೆಗಳ ಗಾಯನ ಮುಂತಾದ ಸತ್ಸಂಗ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಪ್ರಕಟಿಸಿದರು.
ವೀರೇಂದ್ರ ಹೆಗ್ಗಡೆ ಸೋಮವಾರ ಧರ್ಮಸ್ಥಳದಲ್ಲಿ ಬೆಂಗಳೂರಿನ ಆತ್ಮಲಿಂಗ ಪಾದಯಾತ್ರಾ ಸಮಿತಿಯ ಮುಖ್ಯಸ್ಥ ಹನುಮಂತಪ್ಪ ಸ್ವಾಮೀಜಿ ಮತ್ತು ಸದಸ್ಯರನ್ನು ಸನ್ಮಾನಿಸಿ ಮಾತನಾಡಿ ನಮ್ಮ ದೇಹವೇ ದೇಗುಲ, ಆತ್ಮನೇ ಪರಮಾತ್ಮ. ಪ್ರತಿಯೊಬ್ಬರ ಹೃದಯದಲ್ಲಿಯೂ ದೇವರಿದ್ದಾನೆ. ಆದುದರಿಂದ ಭಕ್ತರಲ್ಲೇ ನಾವು ಭಗವಂತನನ್ನು ಕಾಣಬೇಕು ಎಂದರು.
ಪಾದಯಾತ್ರೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ದುಶ್ಚಟಗಳನ್ನು ದೂರ ಮಾಡಿ ಸಾರ್ಥಕ ಜೀವನ ನಡೆಸಬೇಕು. ಪ್ರೀತಿ-ವಿಶ್ವಾಸದ, ಶ್ರದ್ಧಾ-ಭಕ್ತಿಯ ಗೃಹಸ್ಥ ಜೀವನದಿಂದ ಸುಖ-ಸಂತೋಷ, ಶಾಂತಿಯನ್ನು ಪಡೆಯಬಹುದು. ಪಾದಯಾತ್ರೆಯಿಂದ ಆತ್ಮ ಸಾಕ್ಷಾತ್ಕಾರ ಆಗುತ್ತದೆ. ಮನಸ್ಸು ಮತ್ತು ಇಂದ್ರಿಯಗಳ ನಿಯಂತ್ರಣವಾಗುತ್ತದೆ. ವರ್ಷದಲ್ಲಿ ಒಂದು ದಿನ ಮಾತ್ರ ಶಿವರಾತ್ರಿ ಆಚರಣೆ ಅಲ್ಲ. ನಿತ್ಯವೂ ಶಿವರಾತ್ರಿ ಆಗಬೇಕು. ಅಂದರೆ ಶ್ರದ್ಧಾ-ಭಕ್ತಿಯಿಂದ ದೇವರ ಧ್ಯಾನ ಮಾಡಿ, ದುಶ್ವಟಗಳನ್ನು ದೂರ ಮಾಡಿ ಸಾರ್ಥಕ ಜೀವನ ನಡೆಸಬೇಕು ಎಂದೂ ಹೆಗ್ಗಡೆ ಕಿವಿಮಾತು ಹೇಳಿದರು.
ಧರ್ಮಸ್ಥಳಕ್ಕೆ ಈಗಾಗಲೇ 10,000 ಮಂದಿ ಪಾದಯಾತ್ರಿಗಳು ಬಂದಿದ್ದು ಮಂಗಳವಾರ ಶಿವರಾತ್ರಿ ಸಂದರ್ಭ ಇನ್ನೂ ಸಾವಿರಾರು ಪಾದಯಾತ್ರಿಗಳು ಬರುವ ನಿರೀಕ್ಷೆ ಇದೆ ಎಂದು ಕ್ಷೇತ್ರಾಧಿಕಾರಿಗಳು ತಿಳಿಸಿದ್ದಾರೆ.