ಮಂಗಳೂರು: ಮಂಗಳೂರಿನ ಕಸ್ಟಮ್ಸ್ ವಿಭಾಗದ ಡಿ.ಆರ್.ಐ ಅಧಿಕಾರಿಗಳು ಮಹತ್ವದ ಕಾರ್ಯಚರಣೆ ನಡೆಸಿ ಭಾರೀ ಪ್ರಮಾಣದ ಅಕ್ರಮ ಚಿನ್ನ ಸಾಗಾಟ ಯತ್ನವನ್ನು ವಿಫಲಗೊಳಿಸಿದ್ದಾರೆ.ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಮಂದಿ ಆರೋಪಿಗಳನ್ನು ಬಂಧಿಸಿ ಬರೋಬ್ಬರಿ 4 ಕೆಜಿ ಅಕ್ರಮ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.ಮಂಗಳೂರು ವಿಮಾನದ ಮೂಲಕ ಭಾರೀ ಚಿನ್ನದ ಸ್ಮಗ್ಲಿಂಗ್ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಕಸ್ಟಮ್ಸ್ ವಿಭಾಗದ ಡಿ.ಆರ್.ಐ ಅಧಿಕಾರಿಗಳಿಗೆ ಬಂದು ತಲುಪಿತ್ತು.
ಹೀಗಾಗಿ ಅಧಿಕಾರಿಗಳು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಪ್ರಯಾಣಿಕರ ಚಲನವಲನದ ಮೇಲೆ ಹದ್ದಿನ ಕಣ್ಣಿಟ್ಟಿದ್ದರು.ಇದೇ ಸಂದರ್ಭದಲ್ಲಿ ದುಬೈನಿಂದ ಸ್ಪೈಸ್ ಜೆಟ್ ವಿಮಾನದ ಮೂಲಕ ಮಂಗಳೂರಿಗೆ ಬಂದಿಳಿದ ಕಾಸರಗೋಡು ಮೂಲದ ಹಸನ್ ಹಾಗೂ ಸಮೀರಾ ದಂಪತಿಯ ವರ್ತನೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಡಿ.ಆರ್.ಐ ಅಧಿಕಾರಿಗಳು ಅವರನ್ನು ತನಿಖೆಗೆ ಒಳಪಡಿಸಿದ್ದಾರೆ.ಈ ಸಂದರ್ಭದಲ್ಲಿ ಹಸನ್ ಹಾಗೂ ಸಮೀರಾ ತಮ್ಮಮ ಸೊಂಟದಲ್ಲಿ ಬೆಲ್ಟ್ ನಂತಹ ವಸ್ತುವನ್ನು ಸುತ್ತಿಕೊಂಡಿರುವುದು ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ. ಈ ಬೆಲ್ಟನ್ನು ತೆಗೆದು ಪರಿಶೀಲನೆ ನಡೆಸಿದಾಗ ಅದರಲ್ಲಿ ಕಂದು ಬಣ್ಣದ ರಬ್ಬರ್ ನಂತಹ ವಸ್ತು ಇರುವುದು ಕಂಡು ಬಂದಿದೆ. ಈ ಕುರಿತು ಅನುಮಾನ ವ್ಯಕ್ತಪಡಿಸಿದ ಅಧಿಕಾರಿಗಳು ಆ ಕಂದು ಬಣ್ಣದ ವಸ್ತುವನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಚಿನ್ನವನ್ನು ಮಿಶ್ರಣ ಮಾಡಿರುವ ಲೇಪ ಪತ್ತೆಯಾಗಿದೆ .ಈ ಹಿನ್ನೆಲೆಯಲ್ಲಿ ಹಸನ್ ಹಾಗೂ ಸಮೀರಾ ಅವರನ್ನು ಬಂಧಿಸಿ ಅವರಿಂದ 2 ಕೆ.ಜಿ ಚಿನ್ನವನ್ನು ಡಿ.ಆರ್.ಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ . ವಶಪಡಿಸಿ ಕೊಂಡ ಚಿನ್ನದ ಒಟ್ಟು ಮೌಲ್ಯ 66 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.