ಕನ್ನಡ ಕಟ್ಟುವ ಕೆಲಸದಲ್ಲಿ ಒಂದಾಗೋಣ : ಯಶೋಧರ್ ಕರ್ಕೇರ
ಮುಂಬಯಿ,ಫೆ.೨೪: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಮಂಜುನಾಥ ಎಜ್ಯುಕೇಶನ್ ಟ್ರಸ್ಟ್ (ರಿ), ಕಥಾಬಿಂದು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಚಿಂತನ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವು ಮಂಗಳೂರುನ ಉರ್ವಸ್ಟೋರ್ ಯುವವಾಹಿನಿ ಸಭಾಂಗಣದಲ್ಲಿ ನಡೆಯಿತು.
ಕಾಂತಾವರ ಅಲ್ಲಮಪ್ರಭು ಪೀಠದ ಅಧ್ಯಕ್ಷ, ನ್ಯಾ| ಯಶೋಧರ್ ಪಿ.ಕರ್ಕೇರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇತರರಿಗೆ ಕನ್ನಡದ ಬಗ್ಗೆ ಕೇವಲ ನವಂಬರ್ ತಿಂಗಳಲ್ಲಿ ಮಾತ್ರ ನೆನಪಾದರೆ ಹೃದಯ ವಾಹಿನಿ-ಕರ್ನಾಟಕ ಸಂಘಟನೆಗೆ ದಿನ ನಿತ್ಯ ಕನ್ನಡದ ನೆನಪು. ಸದಾಕಾಲ ಕನ್ನಡದ ಪರ ಚಟುವಟಿಕೆಗಳನ್ನು ಹಮ್ಮಿಕೊಂಡಿರುತ್ತದೆ, ಕನ್ನಡ ಕಟ್ಟುವ ಕೆಲಸದಲ್ಲಿ ತೊಡಗಿಸಿ ಕೊಂಡು ಮಾದರಿ ಸಂಘಟನೆಯಾಗಿದೆ. ವಿದೇಶಗಳಲ್ಲಿ ಕೂಡಅತಿ ಹೆಚ್ಚು ಕನ್ನಡ ಡಿಂಡಿಮ ಬಾರಿಸಿದೆ. ಕನ್ನಡದ ಕೆಲಸ ಎಲ್ಲೇ ನಡೆದರೂ ನಾವು ಹೋಗಬೇಕು. ನಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆಯಿತ್ತರು.
ಬಾಹ್ರೇಯ್ನ್ ಕಾಂಚನ ಪ್ರತಿಷ್ಠಾನದ ಸಂಚಾಲಕ ಲೀಲಾಧರ ಬೈಕಂಪಾಡಿ ಮುಖ್ಯ ಅತಿಥಿಯಾಗಿದ್ದು, ಮಾತನಾಡಿ ವಿದ್ಯೆಯ ಮಹತ್ವ ಅರಿತು ವಿದ್ಯಾಭ್ಯಾಸ ಮಾಡಬೇಕು. ವಿದ್ಯೆ ಇಲ್ಲ ವೆಂದಾದರೆ ಜೀವನವೇ ಇರೋಲ್ಲ. ಸಾಹಿತ್ಯ ದಿಂದಲೇ ನಮಗೆ ಸ್ವಾತಂತ್ರ್ಯ ಸಿಕ್ಕಿತು.ಸಾಹಿತ್ಯದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಲು ಆಸಕ್ತಿ, ಏಕಾಗ್ರತೆ ಅಗತ್ಯ ಎಂದರು.
ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ನಗರ ಯೋಜನಾಧಿಕಾರಿ ದಿಲೀಪ್ ಕುಮಾರ್, ಕಾದಂಬರಿಕಾರ ಪಿ.ವಿ.ಪ್ರದೀಪ್ ಕುಮಾರ್ ,ಕವಿ ಬದ್ರುದ್ದೀನ್ ಕೂಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದು ಚಿತ್ರ ಕಲೆಯ ಸಾಧಕ ಬಿ.ಕೆ ಮಾಧವ ರಾವ್ ಅವರನ್ನು ಉಭಯ ಸಂಸ್ಥೆಗಳ ವತಿಯಿಂದ ಕರ್ನಾಟಕ ಸೌರಭ-೨೦೧೮ ಪ್ರಶಸ್ತಿಯನ್ನಿತ್ತು ಗೌರವಿವಿಸಿದರು.
ಸನ್ಮಾನಕ್ಕೆ ಉತ್ತರಿಸಿದ ಮಾಧವ ರಾವ್ ಈಗಿನ ಡಿಜಿಟಲ್ ಯುಗದಲ್ಲಿ ಸೃಜನಶೀಲ ಕಲೆ ಹಿಂದೆ ಬಿದ್ದಂತೆ ಭಾಸವಾದರೂ ಅದು ಅಳಿದು ಹೋಗದು .ಎಲ್ಲರೂ ಕಲೆಯನ್ನು ಪ್ರೋತ್ಸಾಹಿಸಬೇಕು ಎಂದರು.
ಹೃದಯವಾಹಿನಿ ಕರ್ನಾಟಕದ ಅಧ್ಯಕ್ಷ ಇಂ| ಕೆ.ಪಿ ಮಂಜುನಾಥ ಸಾಗರ್ ಸ್ವಾಗತಿಸಿ ಪ್ರ್ರಸ್ತಾವನೆಗೈದು ಪ್ರತೀ ತಿಂಗಳು ಸಾಹಿತ್ಯದ ವಿವಿಧ ಕಾರ್ಯಕ್ರಮಗಳನ್ನು ಪ್ರಾಯೋಜಕರ ಜತೆ ಸೇರಿ ನಾಡಿನ ವಿವಿಧ ಕಡೆ ಹಾಗೂ ವಿದೇಶಗಳಲ್ಲಿ ಕೂಡ ಆಚರಿಸಿಕೊಂಡು ಬರೋದಕ್ಕೆ ಸಹೃದಯರಿಗೆ ಸಹಕಾರವೇ ಕಾರಣ ಎಂದ ಸಾಹಿತ್ಯದ ಮೂಲಕ ಸಾಮರಸ್ಯ ಸಾಧಿಸುವುದೇ ನಮ್ಮ ಗುರಿ ಎಂದರು.
ಉದಯೋನ್ಮುಖ ಸಾಹಿತಿಗಳಿಗೆ ಹಾಗೂ ಸಾಹಿತ್ಯಾಸಕ್ತರಿಗಾಗಿ ಕವನ, ಲೇಖನ ರಚನಾ ಕಮ್ಮಟ ನಡೆಸಲಾಗಿತ್ತು. ಸಾಹಿತಿ ಕಾಸರಗೋಡು ಅಶೋಕ್ ಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಬದ್ರುದ್ದೀನ್ ಕೂಳೂರ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು.ಭಗವಾನ್ ಪ್ರಾಥಿಸಿದರು. ರವಿ.ಎಂ.ಕುಲಶೇಖರ ನಿರೂಪಿಸಿದರು. ಭಗವಾನ್ ಚಿತ್ರ ಲೇಖಾ ತಂಡದವರಿಂದ ಸ್ವರ ಸಂಗಮ ಕಾರ್ಯಕ್ರಮ ನಡೆಯಿತು. ಸಾಹಿತಿ ಕಾಸರಗೋಡು ಅಶೋಕ್ ಕುಮಾರ್ ವಂದಿಸಿದರು.