ಮಂಗಳೂರು: ಮಂಗಳೂರು ಹೊರವಲಯದ ಕೊಣಾಜೆ ಪೊಲೀಸ್ ಠಾಣಾ ಸರಹದ್ದಿನ ತೌಡುಗೋಳಿ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಸ್ಥಳೀಯ ನಿವಾಸಿ ಹಫೀಜ್ ಯಾನೆ ಅಭಿಯಾನೆ ಮೊದಿನಬ್ಬ (32)ನನ್ನು ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ರಾಮರಾವ್ ನೇತೃತ್ವದ ರೌಡಿ ನಿಗ್ರಹ ದಳ ಬಂಧಿಸಿದ್ದು, ಆತನಿಂದ 1.350 ಕೆ.ಜಿ. ಗಾಂಜಾ ಮತ್ತು ನಗದು 2,500 ರೂ. ವಶಪಡಿಸಿಕೊಂಡಿದ್ದಾರೆ.
ತೌಡುಗೋಳಿ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆದಿದೆ. ಹಫೀಜ್ ಮೇಲೆ ಪಾಂಡೇಶ್ವರ, ಕರಾವಳಿ ಕಾವಲು ಪಡೆ ಠಾಣೆ, ಕೊಣಾಜೆ, ಮತ್ತು ಉಳ್ಳಾಲ ಠಾಣೆಗಳಲ್ಲಿ ಈ ಹಿಂದೆ ಗಾಂಜಾ ಮಾರಾಟದ ಬಗ್ಗೆ ಪ್ರಕರಣ ದಾಖಲಾಗಿವೆ. ಒಂದೂವರೆ ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರ ಬಂದಿದ್ದ. ಪ್ರಸಕ್ತ ಈತನ ಮೇಲೆ ಉಳ್ಳಾಲದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ವಾರಂಟ್ ಹೊರಡಿಸಿತ್ತು.