ಕುಂದಾಪುರ: ಯಾವುದೇ ಕ್ಷೇತ್ರಗಳಿಗೂ ಉನ್ನತಿ, ಅವನತಿ ಸಹಜ. ಹೀಗೆಯೇ ಒಂದೊಮ್ಮೆ ಗೌತಮ ಕ್ಷೇತ್ರವೆಂದು ವಿಶ್ವವಿಖ್ಯಾತಿ ಪಡೆದಿದ್ದ ಕುಂಭಾಶಿಯು ನಂತರ ಅವನತಿ ಕಂಡರೂ ಇದೀಗ ಮತ್ತೆ ಗತ ವೈಭವ ಗಳಿಸಿಕೊಳ್ಳುತ್ತಿದೆ. ಸಮರ್ಥ ಯತಿ ವಿಶ್ವವಲ್ಲಭ ತೀರ್ಥರ ನೇತೃತ್ವದಲ್ಲಿ ಅಭಿವೃದ್ಧಿ ಕಡೆಗೆ ಹೆಜ್ಜೆ ಇಡುತ್ತಿದೆ ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥರು ಹೇಳಿದರು, ಕುಂಭಾಶಿಯಲ್ಲಿನ ಶ್ರೀ ಸೋದೆ ವಾದಿರಾಜ ಮಠದ ಮೂಲಸ್ಥಾನ ಶ್ರೀ ಕುಂಭಾಸಿ ಮಠದಲ್ಲಿ ಸಂಪನ್ನಗೊಂಡ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಧಾರ್ಮಿಕ ಸಭೆಯ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ಆಚಾರ್ಯ ಮಧ್ವರು ಮತ್ತು ವಾದಿರಾಜರು ತುಳುನಾಡಿನ ಸೂರ್ಯ-ಚಂದ್ರರು. ಮಧ್ವರ ಹಿರಿಮೆಯನ್ನು ವಾದಿರಾಜರು ತಮ್ಮ ಕೃತಿಗಳ ಮೂಲಕವೆ ಪರಿಚಯಿಸಿಕೊಟ್ಟಿದ್ದಾರೆ. ಸೋದೆ ಮಠದ ಮೂಲ ಯತಿಗಳಾದ ಶ್ರೀ ವಿಷ್ಣುತೀರ್ಥರಿಂದ ಪಾವನವಾದ ಕುಂಭಾಶಿ ಕ್ಷೇತ್ರವು ಧರ್ಮಜಾಗೃತಿ ಕಾರ್ಯ ನಡೆಸುವುದರೊಂದಿಗೆ ಇಂತಹ ಯತಿ ವರ್ಯರ ಕೃತಿಗಳನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ಮಾಡಬೇಕಾಗಿದೆ ಎಂದೂ ಅವರು ಸಲಹೆ ನೀಡಿದರು.
ಸೋದೆ ವಾದಿರಾಜ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥರು ಶ್ರೀ ಸುಬ್ರಹ್ಮಣ್ಯ ಮಠಾಧೀಶರಿಗೆ ಗರುಡ ದೇವರ ಪ್ರತಿಮೆಯನ್ನಿತ್ತು ಸನ್ಮಾನಿಸಿದರು. ನಂತರ ಆಶೀರ್ವಚನ ನೀಡಿದ ಸೋದೆ ಶ್ರೀಗಳು ಶ್ರೀ ವಾದಿರಾಜರು ತಮ್ಮ ತೀರ್ಥಪ್ರಭಂಧ ಗ್ರಂಥದಲ್ಲಿ ಕುಂಭಾಶಿ ಕ್ಷೇತ್ರದ ವರ್ಣನೆ ನೀಡಿದ್ದಾರೆ. ಇಡೀ ಪರಶುರಾಮ ಕ್ಷೇತ್ರವನ್ನೇ ಅವರು ಒಂದು ಗೋವಿನ ಆಕಾರದಲ್ಲಿದೆ ಎಂದು ವರ್ಣಿದ್ದಾರೆ. ಕೋಟೇಶ್ವರ-ಕುಂಭಾಶಿ ಭಾಗ ಆ ಗೋವಿನ ಕೆಚ್ಚಲು ಎಂದು ಹೇಳಲಾಗಿದೆ. ಈ ಪ್ರದೇಶ ಧರ್ಮ, ವಿದ್ಯೆ, ಸಂಸ್ಕೃತಿ, ಐಶ್ವರ್ಯ ಎಲ್ಲಾ ವಿಧದಲ್ಲೂ ಸಮೃದ್ಧಿ ಪಡೆದಿದೆ ಎಂದು ವಿವರಿಸಿದರು.
ಮಠದ ದಿವಾನ ಶ್ರೀನಿವಾಸ ತಂತ್ರಿ ಸ್ವಾಮೀಜಿಯವರಿಗೆ ಮಾಲಿಕೆ ಮಂಗಳಾರತಿ ಬೆಳಗಿದರು. ಜಯಂತಿ ಉಪಾಧ್ಯಾಯ ಪ್ರಾರ್ಥಿಸಿದರು, ವಿಷ್ಣು ಹತ್ವಾರ್ ಸ್ವಾಗತಿಸಿದರು, ವೆಂಕಟೇಶ ಕುಲಕರ್ಣಿ ಕಾರ್ಯಕ್ರಮ ನಿರ್ವಹಿಸಿ, ಶ್ರೀ ಕುಂಭಾಸಿ ಮಠದ ವ್ಯವಸ್ಥಾಪಕ ಲಕ್ಷ್ಮೀನಾರಾಯಣ ಪುರಾಣಿಕ ವಂದಿಸಿದರು.