(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ,: ನವಿ ಮುಂಬಯಿ ಅಲ್ಲಿನ ನೆರೂಲ್ ಪಶ್ಚಿಮದಲ್ಲಿನ ಶ್ರೀ ಶನೀಶ್ವರ ಮಂದಿರದಲ್ಲಿ ಇಂದಿಲ್ಲಿ ಶನಿವಾರ ದಿನಪೂರ್ತಿ ಕಾರ್ಯಕ್ರಮಗಳೊಂದಿಗೆ ವಿಜೃಂಭನೆಯಿಂದ ಹನುಮಾನ್ ಜಯಂತಿ ಆಚರಿಸಲ್ಪಟ್ಟಿತು. ಆ ಪ್ರಯುಕ್ತ ಬೆಳಿಗ್ಗೆ ಪವಮಾನ ಹೋಮ, ಪೂರ್ವಾಹ್ನ ಅಭಿಷೇಕ ಮತ್ತು ಮಹಾ ಪೂಜೆ, ಸಂಜೆ ಭಜನೆ, ರಾತ್ರಿ ಹನುಮಾನ್ ದೇವರಿಗೆ ರಂಗ ಪೂಜೆ ಮತ್ತು ಮಂಗಳಾರತಿ, ತೀರ್ಥಪ್ರಸಾದ, ಅನ್ನ ಪ್ರಸಾದ ಇತ್ಯಾದಿ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಪ್ರಧಾನ ಅರ್ಚಕ ವಿದ್ವಾನ್ ಸೂರಜ್ ಭಟ್ ಮತ್ತು ವೈಧಿಕ ಬಳಗವು ಪೂಜಾಧಿಗಳನ್ನು ನೆರವೇರಿಸಿ ನೆರೆದ ಭಕ್ತಾಭಿಮಾನಿಗಳಿಗೆ ತೀರ್ಥ ಪ್ರಸಾದ ವಿತರಿಸಿ ಅನುಗ್ರಹಿಸಿದರು.
ಈ ಸಂದರ್ಭದಲ್ಲಿ ಮಂದಿರ ಸಮಿತಿ ಅಧ್ಯಕ್ಷ ರಮೇಶ್ ಎಂ.ಪೂಜಾರಿ, ಗೌ| ಪ್ರ| ಕಾರ್ಯದರ್ಶಿ ವಿ.ಕೆ ಸುವರ್ಣ, ಜೊತೆ ಕಾರ್ಯದರ್ಶಿ ಜಯಕರ್ ಬಿ.ಪೂಜಾರಿ, ಜೊತೆ ಕೋಶಾಧಿಕಾರಿ ಕರುಣಾಕರ್ ಎಸ್.ಆಳ್ವ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವೀಣಾ ಬಿ.ಪೂಜಾರಿ, ಪ್ರಬಂಧಕ ದಯಾನಂದ್ ಶೆಟ್ಟಿಗಾರ್, ಪ್ರತಿಷ್ಠಿತ ವಾಸ್ತುತಜ್ಞ ಪಂಡಿತ್ ನವೀನ್ಚಂದ್ರ ಆರ್.ಸನಿಲ್, ಮಾಜಿ ನಗರ ಸೇವಕಿ ಅನಿತಾ ಸಂತೋಷ್ ಶೆಟ್ಟಿ ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾಭಿಮಾನಿಗಳು ದೇವತಾ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ಕ್ಷೇತ್ರದಲ್ಲಿ ಪ್ರತಿಷ್ಠಾಪಿತ ಮಹಾ ಗಣಪತಿ, ಶ್ರೀ ಶನೀಶ್ವರ ಮತ್ತು ಶ್ರೀ ಹನುಮಾನ್ ದೇವರ ಕೃಪೆಗೆ ಪಾತ್ರರಾದರು. ಶ್ರೀ ಶನೀಶ್ವರ ಮಂದಿರದ ವಿಶ್ವಸ್ಥ ಸದಸ್ಯರು, ಸಲಹಾ ಸಮಿತಿ, ಪೂಜಾ ಸಮಿತಿ ಹಾಗೂ ಮಹಿಳಾ ವಿಭಾಗವು ವಿವಿಧ ಸೇವೆಗಳನ್ನು ನಡೆಸಿದರು.