ದೇರಳಕಟ್ಟೆಯಲ್ಲಿ ಎಸ್ಡಿಪಿಐ ಚುನಾವಣಾ ಪೂರ್ವ ಸಮಾವೇಶದಲ್ಲಿ ಹೇಳಿಕೆ
ಮುಸ್ಲಿಂ ಸಮುದಾಯ ಕೇವಲ ಮತ ಹಾಕಲು, ಬ್ಯಾನರ್, ಬಂಟಿಂಗ್ಸ್ ಕಟ್ಟುವ ಪ್ರಭಾವಿ ರಾಜಕಾರಣಿಗಳ ಗುಲಾಮರಾಗದೆ ತಮ್ಮ ಹಕ್ಕು ಪಡೆಯಲು ಮುಂದಾಗಬೇಕು ಎಂದು ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಅನ್ವರ್ ಸಾದಾತ್ ಅಭಿಪ್ರಾಯಪಟ್ಟರು.
ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ದೇರಳಕಟ್ಟೆ ಜಂಕ್ಷನ್ನಲ್ಲಿ ನಡೆದ ಚುನಾವಣಾ ಪೂರ್ವ ಸಮಾವೇಶದಲ್ಲಿ ಮುಖ್ಯ ಭಾಷಣ ಮಾಡಿದರು.
ಕರ್ನಾಟಕದಲ್ಲಿ ದಲಿತರ ಬಳಿಕ ಮುಸ್ಲಿಮರ ಸಂಖ್ಯೆ ಅಧಿಕವಾಗಿದ್ದು, ಕೆಲವೇ ಸಂಖ್ಯೆಯಲ್ಲಿರುವ ಮುಸ್ಲಿಂ ಶಾಸಕರು ಅನ್ಯಾಯದ ವಿರುದ್ಧ ಮಾತನಾಡುತ್ತಿಲ್ಲ. ಉತ್ತರ ಪ್ರದೇಶದಲ್ಲಿ ಸೈಕಲ್ನಲ್ಲಿ ಪ್ರಯಾಣಿಸಿದ ಕಾಂಶೀರಾಂ ಅವರು ಕಟ್ಟಿದ ಬಿಎಸ್ಪಿ ಶೇ.3 ಮತದಿಂದ ಆರಂಭಿಸಿದ ಚುನಾವಣಾ ಪ್ರಯಾಣ ಶೇ.45ಕ್ಕೆ ತಲುಪಿದೆ. ನಾಲ್ಕು ಬಾರಿ ಬಿಎಸ್ಪಿ ಆಡಳಿತ ನಡೆಸಿದೆ ಎಂದಾದರೆ, ಕರ್ನಾಟಕದಲ್ಲಿ ಇದು ಎಸ್ಡಿಪಿಐನಿಂದ ಸಾಧ್ಯವಿದ್ದು, ಜನರ ಬೆಂಬಲ ಅಗತ್ಯ ಎಂದರು.
ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮಾತನಾಡಿ, ಚುನಾವಣಾ ಅಯೋಗ 28 ಲಕ್ಷ ಖರ್ಚನ್ನು ನಿಗದಿಪಡಿಸಿದೆ, ಅಷ್ಟೇ ಹಣ ಖರ್ಚು ಮಾಡಿ ಬಿಜೆಪಿ ಮತ್ತು ಕಾಂಗ್ರೆಸ್ ಚುನಾವಣೆ ಎದುರಿಸಲಿ, ಎಸ್ಡಿಪಿಐ ಕೇವಲ 10 ಲಕ್ಷ ಹಣ ಖರ್ಚು ಮಾಡಿ ಗೆಲುವು ಸಾಧಿಸಿ ತೋರಿಸಲಿದೆ ಎಂದು ಸವಾಲು ಹಾಕಿದರು.
ಮಂಗಳೂರು ಕ್ಷೇತ್ರ ಎಸ್ಡಿಪಿಐ ಅಧ್ಯಕ್ಷ ಅಬ್ಬಾಸ್ ಕಿನ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಅತ್ತಾವುಲ್ಲಾ ಜೋಕಟ್ಟೆ ಉದ್ಘಾಟಿಸಿದರು. ಸಜಿಪ ಗ್ರಾಮ ಪಂಚಾಯಿತಿ ಸದಸ್ಯ ನಾಸೀರ್, ಪಿಎಫ್ಐ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ್, ಪ್ರಮುಖರಾದ ಅಶ್ರಫ್ ಮಂಚಿ, ಅಬ್ದುಲ್ ಸಲಾಂ ಕಾಸರಗೋಡು, ಹನೀಫ್ ಪಡುಕೋಣಾಜೆ, ನ್ಯಾಯವಾದಿ ಮಜೀದ್ ಖಾನ್, ರಫೀಕ್ ದಾರಿಮಿ, ನೌಷಾದ್ ಕಿನ್ಯ, ಅಬ್ದುಲ್ ಲತೀಫ್ ಕೋಡಿಜಾಲ್, ಎ.ಆರ್.ಅಬ್ಬಾಸ್, ರವೂಫ್ ಉಳ್ಳಾಲ್, ಬಶೀರ್ ಅಜ್ಜಿನಡ್ಕ, ನಝೀರ್ ಪುದು, ಸಿದ್ದೀಕ್ ಅರ್ಕಾಣ, ಸುಲೈಮಾನ್ ಉಸ್ತಾದ್ ಪುದು, ರಫೀಕ್ ಮಂಚಿ, ಇರ್ಷಾದ್ ಅಜ್ಜಿನಡ್ಕ, ರಹೀಂ ಮಂಚಿ, ಮುಹಮ್ಮದ್ ಯು.ಬಿ. ಇನ್ನಿತರರು ಉಪಸ್ಥಿತರಿದ್ದರು.
ಝಾಯೀದ್ ಮಲಾರ್ ಸ್ವಾಗತಿಸಿದರು. ಶರೀಫ್ ಅಮ್ಮೆಮ್ಮಾರ್ ಕಾರ್ಯಕ್ರಮ ನಿರೂಪಿಸಿದರು.