ಮುಂಬಯಿ, ಮೇ.04: ವಿಶ್ವ ಪುಸ್ತಕ ದಿನ ಶುಭಾವಸರದಲ್ಲಿ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್ನ ವಿದ್ಯಾನಗರಿ ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವು ಆಯೋಜಿಸಿದ್ದ ಕವಿ ಸಮಯ ಕಾರ್ಯಕ್ರಮವು ಇತ್ತೀಚಿಗೆ ನೇರವೇರಿತು.
ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅವರು ಮಾತನಾಡುತ್ತ ಕನ್ನಡ ಸಾಹಿತ್ಯಕ್ಕೆ ಎರಡು ಸಾವಿರÀ ಇತಿಹಾಸವಿದೆ. ಕನ್ನಡ ಸಾಹಿತ್ಯವು ಬಹು ಶ್ರೀಮಂತದಿಂದ ಕೂಡಿದೆ. ಕಥೆ, ಕಾವ್ಯ, ನಾಟಕ, ಕಾದಂಬರಿ, ವಿಮರ್ಶೆ ಸಂಶೋಧನೆ ಇತ್ಯಾದಿ ಸಾಹಿತ್ಯ ಪ್ರಕಾರಗಳಿಂದ ಸಾಹಿತ್ಯಕ್ಕೆ ಕನ್ನಡದ ಹಿರಿ-ಕಿರಿಯ ಬರಹಗಾರರು ಕಸುವು ತುಂಬಿದ್ದಾರೆ. ಕಾವ್ಯ ಕಾಮನ ಬಿಲ್ಲು ಇದ್ದ ಹಾಗೆ. ಅದೊಂದು ಮಿಂಚು ಇದ್ದಂತೆ. ಓದುಗನ ಅಂತರಂಗವನ್ನು ಕೆಡುಕುವ ಕಾವ್ಯವೇ ನಿಜವಾದ ಕಾವ್ಯವಾಗಬಲ್ಲದು. ಇತ್ತೀಚೆಗೆ ನಾವೆಲ್ಲ ತುಂಬ ಮಾತನಾಡುತ್ತೇವೆ. ಬರೆಯುವುದು ಮಾತ್ರ ಕಡಿಮೆ. ಬರವಣೆಗೆ ಎಚ್ಚರಿಕೆಯಿಂದ ಆಗುವಂತಹದು. ಸತತ ಓದು, ಪರಿಶ್ರಮ ಇದ್ದರೆ ಲೇಖಕನು ಸುಲಭವಾಗಿ ಸಾಹಿತ್ಯ ರಚನೆ ಮಾಡಲು ಸಾಧ್ಯ. ಮುಂಬಯಿ ಯುವ ಬರಹಗಾರರಿಗೆ ಚಿತ್ತಾಲ, ಬಲ್ಲಾಳ, ಜಯಂತ ಕಾಯ್ಕಿಣಿ ಮೊದಲಾದ ಹಿರಿಯ ಲೇಖಕರು ಮಾದರಿಯಾಗಿದ್ದಾರೆ. ಬೇರೆ ಸಾಹಿತಿಗಳ ಕೃತಿಗಳನ್ನು ಓದದೆ ಕೃತಿ ರಚನೆ ಸಾಧ್ಯವಾಗದು ಎಂದು ತಿಳಿಸಿದರು.
ದಾಕ್ಷಾಯಣಿ ಯಡವಳ್ಳಿ ಅವರು ಜಾನಪದ ಹಾಡುಗಳನ್ನು ಹಾಡಿದರು. ಶಾರದಾ ಅಂಬೆಸಂಗ ಅವರು ಸ್ವರಚಿತ ಕವಿತೆಗಳನ್ನು ವಾಚಿಸಿದರು. ಅಮೃತಾ ಶೆಟ್ಟಿ, ಲಕ್ಷ್ಮೀ ಹೆರೂರ, ಜಯಕರ ಪಾಲನ್, ಶೈಲಜಾ ಹೆಗಡೆ, ಉದಯ ಶೆಟ್ಟಿ, ರಮಾ ಉಡುಪ, ಜಯಾ ಸಾಲಿಯಾನ್, ಮಧುಸೂಧನ್ ರಾವ್, ಸುರೇಖಾ ದೇವಾಡಿಗ, ಶಿವರಾಜ ಎಂ.ಜಿ, ದಿನಕರ ಚಂದನ, ಕುಮುದಾ ಆಳ್ವ ಮೊದಲಾದವರು ಉಪಸ್ಥಿತರಿದ್ದರು. ಡಾ| ಪೂರ್ಣಿಮಾ ಎಸ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ದುರ್ಗಪ್ಪ ಕೋಟಿಯವರ್ ವಂದಿಸಿದರು.