ಮಂಗಳೂರು: ಭಾರೀ ಕುತೂಹಲ ಕೆರಳಿಸಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಹುರಿಯಾಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಆಪ್ತರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಅಕ್ರಮ ಹಣ ಕೂಡಿಟ್ಟ ಆರೋಪದ ಮೇಲೆ ರಮಾನಾಥ್ ರೈ ಅವರ ಇಬ್ಬರು ಆಪ್ತರ ಮೇಲೆ ಐಟಿ ದಾಳಿ ನಡೆದಿದೆ. ಜೊತೆಗೆ ಇಬ್ಬರೂ ಅಪ್ತರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇವರಲ್ಲಿ ಡೆನ್ಜಿಲ್ ಡಿಸೋಜಾ ರಮಾನಾಥ ರೈ ಅವರ ಆಪ್ತ ಸಹಾಯಕರಾಗಿದ್ದು ಅವರನ್ನೂ ವಶಕ್ಕೆ ಪಡೆಯಲಾಗಿದೆ.ಬುಧವಾರ ತಡರಾತ್ರಿ ಈ ದಾಳಿ ನಡೆದಿದ್ದು ಬಂಟ್ವಾಳ ಮತ್ತು ಮಂಗಳೂರಿನಲ್ಲಿ ದಾಳಿ ನಡೆಸಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.ಚುನಾವಣಾ ಸಂದರ್ಭದಲ್ಲಿ ಹಲವು ಕಾಂಗ್ರೆಸ್ ನಾಯಕರು ಮತ್ತು ನಾಯಕರ ಆಪ್ತರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿದ್ದು, ಈ ಸಾಲಿಗೆ ಇದೀಗ ದಕ್ಷಿಣ ಕನ್ನಡದ ಹಿರಿಯ ನಾಯಕ ರಮಾನಾಥ ರೈ ಕೂಡ ಸೇರ್ಪಡೆಯಾಗಿದ್ದಾರೆ.